ಆರ್ಕಾಟೆ ನರಸಿಂಹ ಖಾರ್ವಿ ರಸ್ತೆ ಲೋಕಾರ್ಪಣೆ

ಕೋಡಿಕನ್ಯಾನ ಗ್ರಾಮದ ಮೊದಲ ಅಧ್ಯಕ್ಷರಾಗಿದ್ದ (ಚೇರ್ ಮೆನ್ ) ದಿ.ಆರ್ಕಾಟೆ ನರಸಿಂಹ ಖಾರ್ವಿ ಅವರ ಹೆಸರುಳ್ಳ ನಾಮಫಲಕ ಅನಾವರಣ ಕಾರ್ಯಕ್ರಮ ಕೋಡಿ ಕನ್ಯಾನ ಗ್ರಾಮ ಪಂಚಾಯತ್ ವತಿಯಿಂದ ನಡೆಯಿತು. ಕೋಡಿಕನ್ಯಾನದಲ್ಲಿ ಆರೋಗ್ಯ ಕೇಂದ್ರ ಹಾಗೂ ಮೀನುಗಾರರ ಸೊಸೈಟಿಯ ಪ್ರಾಜೆಕ್ಟ್‌ಗಳನ್ನು ಕೂಡ ಅಂದಿನ ಕಾಲದಲ್ಲಿ ಇವರೇ ಯಶಸ್ವಿಯಾಗಿ ಮುನ್ನಡೆಸಿದ್ದರು. ಸಮಾಜಕ್ಕೆ ಆದರ್ಶಪ್ರಾಯರಾಗಿ, ಊರ ಹಿರಿಯರ ಗೌರವಕ್ಕೆ ಭಾಜನರಾಗಿದ್ದ ದಿವಂಗತ ನರಸಿಂಹ ಆರ್ಕಾಟೆಯವರ ನೆನಪು ಶಾಶ್ವತವಾಗಿರಲಿ ಎಂಬ ಉದ್ದೇಶದಿಂದ, ಕೋಡಿ ಕನ್ಯಾನದ ಚಕ್ರೇಶ್ವರಿ ದೇವಸ್ಥಾನದಿಂದ ಪೂರ್ವಕ್ಕೆ ಸಾಗುವ ರಸ್ತೆಗೆ ಅವರ ಹೆಸರನ್ನು ನಾಮಕರಣ ಮಾಡಲು ಕೋಡಿ ಗ್ರಾಮ ಪಂಚಾಯತ್ ವಿಶೇಷ ನಿರ್ಧಾರ ಕೈಗೊಂಡು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ರವೀಂದ್ರರವರು ಮಾಹಿತಿ ನೀಡಿದರು.

ಉದ್ಘಾಟನಾ ಸಮಾರಂಭದಲ್ಲಿ ಪ್ರಾಸ್ತಾವಿಕ ಮಾತುಗಳನ್ನಾಡಿದ ಹಿರಿಯರಾದ ಕುಂದಾಪುರ ನಾರಾಯಣ ಖಾರ್ವಿಯವರು, ಮೂಲಭೂತ ಅಗತ್ಯಗಳ ಬಗ್ಗೆ ಮಾತ್ರ ಚಿಂತಿಸುತ್ತಿದ್ದ ಕಾಲದಲ್ಲೇ, ಕೋಡಿ ಕನ್ಯಾನದ ಮಹನೀಯರ ಅಭ್ಯುದಯಕ್ಕೆ ಆ ಕಾಲದವರಿಗಿಂತಲೂ ಬಹುದೂರ ದೃಷ್ಟಿ ಹೊಂದಿದ್ದ, ನಾಡನ್ನು ಕಟ್ಟಲು ಶಿಕ್ಷಣವೇ ಅತ್ಯುತ್ತಮ ಅಸ್ತ್ರವೆಂದು ಅವರು ಅರಿತು, ಶಿಕ್ಷಣ ಕ್ರಾಂತಿಗೆ ಕೋಡಿಕನ್ಯಾನ ಪ್ರದೇಶದಲ್ಲಿ ಮುನ್ನಡೆ ನೀಡಿದವರಾಗಿದ್ದಾರೆ. ಊರಿನ ಏಳಿಗೆಗಾಗಿ ಜೀವನವಿಡೀ ಹೋರಾಡಿದ ಈ ಸಮಾಜಸೇವಕರನ್ನು ಇಂದು ನಾವು ತುಂಬಾ ನೆನಪಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗೀತಾ ಖಾರ್ವಿಯವರು ನಾಮ ಫಲಕದ ಉದ್ಘಾಟನೆಯನ್ನು ನೆರವೇರಿಸಿದರು. ಸಮಾರಂಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಪ್ರಭಾಕರ್ ಮೆಂಡನ್, ಕೃಷ್ಣಪೂಜಾರಿ, ಅಂತೋನಿ ಡಿಸೋಜ, ವಿಮಲ ಖಾರ್ವಿ , ಕೊಂಕಣಿ ಖಾರ್ವಿ ಸಮಾಜದ ಮುಖಂಡರಾದ ಮಾಧವ ಖಾರ್ವಿ, ಲೋಕವೇದ್ ಕಲಾಮಂಡ್ ನ ಅಧ್ಯಕ್ಷರಾದ ರಾಮಚಂದ್ರ ಖಾರ್ವಿ, ಕಾರ್ಯದರ್ಶಿ ಧೀರಜ್ ಖಾರ್ವಿ, ಸಾಂಸ್ಕೃತಿಕ ಕಾರ್ಯದರ್ಶಿ ಮಡಿ ವಿಶ್ವನಾಥ ಖಾರ್ವಿ ಹಾಗೂ ಪದಾಧಿಕಾರಿಗಳು, ಈಜು ಪಟು ಗೋಪಾಲ ಖಾರ್ವಿ,ಆರ್ಕಾಟೆ ನರಸಿಂಹ ಖಾರ್ವಿಯವರ ಸುಪುತ್ರ ಐಯ್ತ ಖಾರ್ವಿ, ಶ್ರೀ ಚಕ್ರೇಶ್ವರಿ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು ಮತ್ತು ಊರಿನ ನಾಗರಿಕರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಹಕರಿಸಿದವರಿಗೆ ಆನಂದ ತಂಡೇಲ್ ಅವರು ಧನ್ಯವಾದಗಳನ್ನು ನೀಡಿದರು.

ವರದಿ : ಮಡಿ ವಿಶ್ವನಾಥ ಖಾರ್ವಿ

Leave a Reply

Your email address will not be published. Required fields are marked *