ವಾಣಿಜ್ಯ ಬಂದರುಗಳ ನಿರ್ಮಾಣ ಪುನರ್ ಪರಿಶೀಲನೆಗೆ ಆಗ್ರಹ

ವಾಣಿಜ್ಯ ಬಂದರುಗಳ ನಿರ್ಮಾಣ ಪುನರ್ ಪರಿಶೀಲನೆಗೆ ಆಗ್ರಹ

ಉತ್ತರ ಕನ್ನಡ ಜಿಲ್ಲೆ ಪರಿಸರ ಸೂಕ್ಷ್ಮ ವಾಗಿದ್ದು ಪರಿಮಿತಿಗಿಂತ ಹೆಚ್ಚು ವಾಣಿಜ್ಯ ಬಂದರುಗಳ ನಿರ್ಮಾಣ ಮಾಡುವುದನ್ನು ರಾಜ್ಯ ಹಾಗೂ ಕೇಂದ್ರ ಸರಕಾರಗಳು ಪುನರ್ ಪರಿಶೀಲಿಸಬೇಕು ಎಂದು ರಾಷ್ಟ್ರೀಯ ಮೀನುಗಾರರ ಸಂಘಟನೆಯ ರಾಜ್ಯ ಕಾರ್ಯದರ್ಶಿ ಚಂದ್ರಕಾಂತ ಕೊಚರೇಕರ ಆಗ್ರಹಿಸಿದ್ದಾರೆ.

ಕಾಸರಕೋಡು ಸೇರಿದಂತೆ ಹೊಸದಾಗಿ ವಾಣಿಜ್ಯ ಬಂದರುಗಳನ್ನು ನಿರ್ಮಿಸುವ ಅನಗತ್ಯ ಯೋಜನೆಗಳನ್ನು ಜಿಲ್ಲೆಯ ಮಟ್ಟಿಗೆ ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ. ಜಿಲ್ಲೆಯ ಕೇವಲ 120 ಕಿ.ಮೀ ಕರಾವಳಿಯಲ್ಲಿ ಕೇಂದ್ರ ಸರಕಾರವು ಸಾಗರ ಮಾಲಾ ಯೋಜನೆಯಲ್ಲಿ ಕಾರವಾರ, ಬೆಲೇಕೇರಿ, ತದಡಿ, ಹೊನ್ನಾವರ, ಪಾವಿನಕುರ್ವೆ, ಮಂಕಿ, ಭಟ್ಕಳ ಏಳು ಸ್ಥಳಗಳನ್ನು ಅಯ್ಕೆ ಮಾಡಿರುವದು ತೀರಾ ಅವೈಜ್ಞಾನಿಕ ಮತ್ತು ಅವಾಸ್ತವಿಕ ಕ್ರಮ ಆಗಿದೆ.

ಇದರಿಂದಾಗಿ ಜಿಲ್ಲೆಯ ಕಡಲತೀರಗಳಲ್ಲಿ ಎರಡುವರೆ ಲಕ್ಷಕ್ಕೂ ಹೆಚ್ಚು ಮೀನುಗಾರರ ಬದುಕಿಗೆ ಕೊಳ್ಳಿ ಬೀಳುತ್ತದೆ. ಪಾರಂಪರಿಕ ಮತ್ತು ಒಣ ಮೀನುಗಾರಿಕೆ ಸಂಪೂರ್ಣ ನಾಶವಾಗಲಿದೆ. ಪರಿಸರ ಮತ್ತು ಜೀವ ವೈವಿಧ್ಯತೆಗಳ ವಿನಾಶಕ್ಕೆ ದಾರಿ ಮಾಡಿಕೊಡುತ್ತದೆ. ಪಣಂಬೂರು, ಕಾರವಾರ ಮತ್ತು ಬೇಲೇಕೇರಿ ವಾಣಿಜ್ಯ ಬಂದರುಗಳು ಕಾರ್ಗೋ ಸಹಿತ ವಿವಿಧ ಸರಕುಗಳ ವಹಿವಾಟಿನ ನಿಗದಿತ ಗುರಿಯ ಅರ್ಧದಷ್ಟನ್ನೂ ತಲುಪಲು ಇನ್ನೂ ಸಾಧ್ಯವಾಗಿಲ್ಲ. ಅವುಗಳ ಸಾಮರ್ಥ್ಯಕ್ಕೆ ತಕ್ಕಂತೆ ರಾಜ್ಯದಲ್ಲಿ ಕೈಗಾರಿಕೆಗಳ ಬೆಳವಣಿಗೆಗಳೂ ಆಗಿಲ್ಲ. ಹೀಗಿರುವಾಗ ಹೊನ್ನಾವರದ ಪಾವಿನಕುರ್ವೆ, ಮಂಕಿ, ತದಡಿ ಸೇರಿದಂತೆ ಕರಾವಳಿಯ ಉದ್ದಕ್ಕೂ 13 ಕ್ಕೂ ಹೆಚ್ಚು ವಾಣಿಜ್ಯ ಬಂದರುಗಳನ್ನು ನಿರ್ಮಿಸಲು ಯೋಜಿಸಿರುವದು ಈಗಿನ ಕಾರವಾರ, ಬೆಲೇಕೇರಿ ಮತ್ತು ನವ ಮಂಗಳೂರು ಪಣಂಬೂರು ವಾಣಿಜ್ಯ ಬಂದರುಗಳ ವಹಿವಾಟನ್ನು ಕುಗ್ಗಿಸುವ ಕ್ರಮವಾಗುತ್ತದೆಯೇ ಹೊರತೂ ಸ್ಥಳೀಯವಾಗಿ ಹೆಚ್ಚಿನ ಯಾವುದೇ ರೀತಿಯ ಅಭಿವೃದ್ಧಿ, ಉದ್ಯೋಗ ಅವಕಾಶಗಳು ಸೃಷ್ಟಿಯಾಗದು ಎಂದಿದ್ದಾರೆ.

ಕಂಡ ಕಂಡಲ್ಲಿ ವಾಣಿಜ್ಯ ಬಂದರು ನಿರ್ಮಿಸುವ ಸರಕಾರಗಳ ಈ ಯೋಜನೆಯಿಂದ ಜನರ ತೆರಿಗೆಯ ಹಣದುಂದು ವೆಚ್ಚವಾಗಲಿದೆ. ನಮ್ಮ ಕರಾವಳಿಯು ಮೀನುಗಾರಿಕೆಯೊಂದಿಗೆ ಪ್ರವಾಸೋದ್ಯಮಕ್ಕೆ ಮಾತ್ರ ಸೂಕವಾಗಿದೆ ಎಂದಿದ್ದಾರೆ. ಜಿಲ್ಲೆಯಲ್ಲಿ ಸೀಬರ್ಡ ಯೋಜನೆಯಿಂದ ಸಾವಿರಾರು ಕುಟುಂಬಗಳು ನಿರಾಶ್ರಿತವಾಗಿದೆ. ಕಾರವಾರದಿಂದ ತದಡಿ ವರೆಗಿನ ಕಡಲ ತೀರವು ಈಗ ಹಲವು ನಿಬಂಧನೆಗಳಿಗೆ ಒಳಪಟ್ಟಿದೆ. ಇಂಥ ಪರಿಸ್ಥಿತಿಯಲ್ಲಿ ಕರ್ನಾಟಕ ಸರಕಾರವು ಅಭಿವೃದ್ಧಿ ನಿಷೇಧಿತ ಕಾಸರಕೋಡ ಟೊಂಕಾದಲ್ಲಿ ಖಾಸಗಿ ವಾಣಿಜ್ಯ ಬಂದರು ನಿರ್ಮಿಸಲು ಅವಕಾಶ ಮಾಡಿಕೊಟ್ಟಿದೆ. ಸ್ಥಳೀಯರ ಪ್ರತಿಭಟನೆ ಮತ್ತು ತೀವೃವಿರೋಧದ ನಡುವೆಯು ಬಲವಂತವಾಗಿ ಹೇರಲು ಹೊರಟಿದೆ. ಈ ಯೋಜನೆಯು ಅನುಷ್ಠಾನವಾದರೆ ಹೊನ್ನಾವರ ಪಟ್ಟಣವೂ ಸೇರಿದಂತೆ ತಾಲೂಕಿನ ಕಾಸರಕೋಡ, ಕರ್ಕಿ, ಪಾವಿನಕುರ್ವೆ, ಗ್ರಾಮಗಳ ಪರಿಸರಕ್ಕೆ ಮತ್ತು ಜನಸಾಮಾನ್ಯರ ಆರೋಗ್ಯಕ್ಕೆ ಮಾರಕ, ಜಲಮಾಲಿನ್ಯ ಉಂಟಾಗಲಿದೆ. ಶರಾವತಿ ನದಿ ಪ್ರದೇಶದಲ್ಲಿ ಕೃಷಿ, ಕುಡಿಯುವ ನೀರಿಗೆ ಉಪ್ಪು ನೀರಿನ ಸಮಸ್ಯೆ ಈಗಾಗಲೇ ಹೆಚ್ಚಾಗಿದ್ದು ಬಂದರು ತ್ಯಾಜ್ಯದಿಂದ ಇನ್ನಷ್ಟು ಗಂಭೀರ ಪರಿಣಾಮ ಬೀರಲಿದೆ.

ಹೊನ್ನಾವರ ನಗರ ಮತ್ತು ಕಾಸರಕೋಡ,ಕರ್ಕಿ, ಪಾವಿನಕುರ್ವೆ, ಕುಳಕೋಡ, ಮಾವಿನಕುರ್ವೆ ಸಹಿತ ಹಲವು ಗ್ರಾಮಗಳ ಪರಿಸರವು ಧೂಳಿನ ಕಣಗಳಿಂದ ಕಲುಷಿತಗೊಳ್ಳುತ್ತವೆ. ಹತ್ತು ಕಿಲೋ ಮೀಟರ ಸುತ್ತಮುತ್ತಲ ಪ್ರದೇಶದ ಪರಿಸರ ಹಾಗೂ ಶರಾವತಿ ನದಿಯ ನೀರು ಸಹಿತ ಕಾಸರಕೋಡ ಮತ್ತು ಹೊನ್ನಾವರ ನಗರ ಪ್ರದೇಶದಲ್ಲಿನ ಅಂತರ್ಜಲ ಕಲುಷಿತಗೊಳ್ಳುವದನ್ನು ತಡೆಯಲು ಯಾವುದೇ ತಂತ್ರಜ್ಞಾನದಿಂದಲೂ ಸಾಧ್ಯವಿಲ್ಲ ಎನ್ನುವುದಕ್ಕೆ ನವ ಮಂಗಳೂರು ಬಂದರು ಪುರಾವೆ ಒದಗಿಸಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಕಾಸರಕೋಡ ಟೊಂಕದ ಉದ್ದೇಶಿತ ವಾಣಿಜ್ಯ ಬಂದರು ಯೋಜನೆಗೂ ಸಾಗರಮಾಲಾ ಯೋಜನೆಗೂ ಯಾವುದೇ ಸಂಬಂಧವಿಲ್ಲ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮೂಲಕ ಅಭಿವೃದ್ಧಿ ನಿಷೇಧಿತ ಕಾಸರಕೋಡ ಕಡಲತೀರದಲ್ಲಿ ಸರಕಾರಿ ಅನುದಾನದಲ್ಲಿ ಸುಲಭದಲ್ಲಿ ರಸ್ತೆ ಮತ್ತು ರೈಲು ಸೌಲಭ್ಯವನ್ನು ಹೊಂದಲು ಹೊನ್ನಾವರ ಪೋರ್ಟ್ಸ್ ಪ್ರೈವೇಟಲಿ. ಖಾಸಗಿ ಕಂಪೆನಿಯು ಹಿಂಬಾಗಿಲ ಪ್ರಯತ್ನಗಳನ್ನು ನಡೆಸುತ್ತಿದ್ದು ನಿಯಮ ಬಾಹೀರವಾಗಿ ರಸ್ತೆ ಕಾಮಗಾರಿ ನಡೆಸುವ ಯತ್ನಗಳು ನಡೆದಿದೆ. ಯೋಜನೆಯನ್ನು ವಿರೋಧಿಸುವವರ ಮೇಲೆ ಸುಳ್ಳು ದೂರುಗಳನ್ನು ದಾಖಲಿಸಲಾಗುತ್ತಿದೆ. ಈ ಖಾಸಗಿ ಕಂಪನಿಗಾಗಿ ಸರಕಾರಿ ಆಡಳಿತ ಯಂತ್ರದ ದುರ್ಬಳಕೆ ಆಗುತ್ತಿದೆ ಎಂದು ಆರೋಪಿಸಿದ್ದಾರೆ.

ಚುನಾವಣಾ ರಾಜಕಾರಣಕ್ಕೆ ಕಾಂಚಾಣ ಒದಗಿಸುವ ಕಾಮಧೇನು .? ಸ್ಥಳೀಯರ ವಿರೋಧದ ನಡುವೆಯೂ ಕಾಸರಕೋಡ ಖಾಸಗಿ ವಾಣಿಜ್ಯ ಬಂದರು ನಿರ್ಮಾಣವಾದರೆ ಅವರ ಯೋಜನಾ ವರದಿಯ ಪ್ರಕಾರ ಕೇವಲ 74 ಜನರಿಗೆ ಮಾತ್ರ ಉದ್ಯೋಗ ಸಿಗುವ ಪ್ರಸ್ತಾವ ಇದ್ದು, ಅದರಲ್ಲಿ ಪ್ರಮುಖ ಹುದ್ದೆಗಳಿಗೆ ಈಗಾಗಲೇ ಹೊರಗಿನವರ ನೇಮಕ ಮಾಡಿಯಾಗಿದೆ. ಇನ್ನು ಗೇಟ್ ಕೀಪರ್, ಜವಾನ ಇತ್ಯಾದಿ ನಾಲ್ಕಾರು ಹುದ್ದೆಗಳಿಗೆ ಮಾತ್ರ ಮುಂದೆ ಸ್ಥಳೀಯರಿಗೆ ಅದ್ಯತೆ ಮೇಲೆ ನೀಡಬಹುದು. ಕಂಪನಿಯ ಪಾಲುದಾರರು ಮತ್ತು ಅವರ ಹಿತ ಸಂಬಂಧಿಗಳಿಗೆ ಆಮದಾಗುವ ಸರಕು ಸಾಗಾಣಿಕೆಯ ಹೊಣೆ ವಹಿಸಿದ ಮಾತ್ರಕ್ಕೆ ಅದರಿಂದ ನಮ್ಮ ಜಿಲ್ಲೆಯ ಅಭಿವೃದ್ಧಿ ಆಗುತ್ತದೆಯೇ ?. ಈ ಖಾಸಗಿ ಬಂದರು ಯೋಜನೆಯು ಸದ್ಯದ ಚುನಾವಣಾ ರಾಜಕಾರಣಕ್ಕೆ ಕೆಲವರಿಗೆ ಕಾಂಚಾಣ ಒದಗಿಸುವ ಕಾಮಧೇನುವಾಗಬಹುದು.

ಸಾಗರ ಮಾಲಾ ಯೋಜನೆಯಲ್ಲಿ ಚತುಷ್ಪಥರಸ್ತೆ ಮತ್ತು ರೈಲು ಮಾರ್ಗ ಹೊಂದುವ ಹುನ್ನಾರಗಳು ನಡೆಯುತ್ತಿದೆ. ಇದರಿಂದ ಖಾಸಗಿ ಕಂಪನಿಗೆ ಲಾಭ ವಾಗಬಹುದೇ ಹೊರತು ಸ್ಥಳೀಯರಿಗೆ ಉದ್ಯೋಗಾವಕಾಶಗಳು ತೆರೆದುಕೊಳ್ಳುತ್ತವೆ. ಜಿಲ್ಲೆಯ ಅಭಿವದ್ಧಿ ಆಗಲಿದೆ ಎನ್ನುವದು ಸುಳ್ಳಿನ ಕಟ್ಟುಕಥೆಯಾಗಿದೆ ಎಂದು ಬಂದರು ವಿರೋಧಿ ಹೋರಾಟ ಸಮಿತಿಯ ಅಧ್ಯಕ್ಷ ರಾಜೇಶ ತಾಂಡೇಲ ಅತಂಕ ವ್ಯಕ್ತಪಡಿಸಿದ್ದಾರೆ. ಕಾಸರಕೋಡ ಬಂದರು ಯೋಜನೆಯ ವಿರುದ್ಧ ಸ್ಥಳೀಯರ ಸಂಘಟಿತ ಮತ್ತು ಕಾನೂನು ಹೋರಾಟವನ್ನು ಮುಂದುವರಿಸುವದಾಗಿ ತಿಳಿಸಿದ್ದಾರೆ.

2 thoughts on “ವಾಣಿಜ್ಯ ಬಂದರುಗಳ ನಿರ್ಮಾಣ ಪುನರ್ ಪರಿಶೀಲನೆಗೆ ಆಗ್ರಹ

  1. ದೆಹಲಿಯಲ್ಲಿ ಕುಳಿತು 2000 ಕಿಮೀ ದೂರದ ಸ್ಥಳವನ್ನು ಅಭಿವೃದ್ಧಿಪಡಿಸಲು ಯೋಜಿಸಿದಾಗ, ಇದೆ ಆಗುತ್ತದೆ ….ಮತ್ತು ನಿಸ್ಸಂಶಯವಾಗಿ ಮಧ್ಯವರ್ತಿಗಳು ಮತ್ತು ಅವಕಾಶವಾದಿಗಳು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ. ಅಭಿವೃದ್ಧಿಯ ವಿಷಯದಲ್ಲಿ ನಾವು ಪಶ್ಚಿಮದ ನಕಲನ್ನು ಮಾಡುವುದನ್ನು ನಿಲ್ಲಿಸಬೇಕು… ಯಾಕೆಂದರೆ ನಮ್ಮ ದೇಶದಲ್ಲಿ ಪ್ರತಿ 100km ನಂತರ ಎಲ್ಲವೂ ಬದಲಾಗುತ್ತದೆ.. ಅದು ಭಾಷೆ, ಸಂಸ್ಕೃತಿ ಅಥವಾ ಭೌಗೋಳಿಕವಾಗಿರಬಹುದು…ಈ ವ್ಯತ್ಯಾಸಗಳನ್ನು ನಿರ್ಲಕ್ಷಿಸುವ “ಒನ್ ಸೈಸ್ ಫಿಟ್ ಆಲ್” ಎಂಬ ಆರ್ಥಿಕ ನೀತಿಯ ಮೇಲಿನ ಅತಿಯಾದ ಅವಲಂಬನೆ ಅನೇಕ ಪ್ರಮುಖ ನ್ಯೂನ್ಯತೆಗಳಿಗೆ ಕಾರಣವೆಂದು ತಜ್ಞರು ಹೇಳಿದ್ದಾರೆ ಅಂತಿಮವಾಗಿ. ಮಂಗಳೂರು ಮತ್ತು ಕಾರವಾರ ಬಂದರು ಅಭಿವೃದ್ಧಿಯಲ್ಲಿ ಭೂಮಿ ಕಳೆದುಕೊಂಡ ಎಷ್ಟು ಮೀನುಗಾರರಿಗೆ ಬಂದರಿನಲ್ಲಿ ಕೆಲಸ ಸಿಗುತ್ತದೆ ಎಂದು ಯಾರಿಗಾದರೂ ತಿಳಿದಿದೆಯೇ?

    1. ಬೆದರಿಕೆಯಷ್ಟು ಮೀನುಗಾರರಿಗೆ ಕೆಲಸ ಸಿಗುವುದಕ್ಕಿಂತ ಅಸಂಖ್ಯಾತ ಮೀನುಗಾರರು ತಮ್ಮ ಮನೆ ಮಠ ಕಳೆದುಕೊಂಡು ಬೀದಿಗೆ ಬೀಳುತ್ತಾರೆ ಎಲ್ಲಿಂದಲೋ ಬಂದ ಬ್ಯುಸಿನೆಸ್ಮೆನಗಳು ಹಣ ಮಾಡ್ಕೊಂಡು ಆರಾಮಾಗಿ ಇರುತ್ತಾರೆ ಕಡೆಗೆ ಇಲ್ಲಿ ಮೀನುಗಾರರ ಪರಿಸ್ಥಿತಿ ಬಗ್ಗೆ ವಿಚಾರ ಮಾಡೋರು ಯಾರು ಬರಲ್ಲ ಮೀನುಗಾರರನ್ನ ಮತ್ತಷ್ಟು ಬಡತನಕ್ಕೆ ತಳ್ಳುವ ಯೋಜನೆ ಸಮಸ್ತ ಮೀನುಗಾರರಿಗೆ ಬೇಡ ಅಷ್ಟೇ ಅಲ್ಲ ಮೀನುಗಾರರು ತಮ ತಮ್ಮ ಒಳಗಿನ ಅಸೂಯೆ ಹೊಟ್ಟೆಕ್ಕಿಚ್ಚು ಕಚ್ಚಾಟ ಬಿಟ್ಟು ಒಗ್ಗಟ್ಟಿನಿಂದ ಇದ್ದರೆ ಮೀನುಗಾರರಿಗೆ ಮಾರಕವಾಗಿರುವ ಇಂತಹ ಯೋಜನೆಯ ವಿರುದ್ಧ ಮೆಟ್ಟಿ ನಿಲ್ಲಬಹುದು ಸಮಸ್ತ ಮೀನುಗಾರ ಬಾಂಧವರೆ ಈಗಲಾದರೂ ಹುಷಾರಿಗಿ ಎಲ್ಲರೂ ಒಗ್ಗಟ್ಟಿನಿಂದ ಇರಿ ಅಷ್ಟೆ ಹೇಳೋದು ಇದರ ಮೇಲೆ ನಿಮ್ಮಿಷ್ಟ ಇಷ್ಟ

Leave a Reply to Ram Prasanna Cancel reply

Your email address will not be published. Required fields are marked *