ಹೋರಾಟದ ಹಾದಿ: ರಾಮಪ್ಪ ಖಾರ್ವಿಯವರ ಪ್ರಾಮಾಣಿಕ ಬದುಕಿನ ಅನಾವರಣ

60ರ ಆಸುಪಾಸಿನಲ್ಲಿಯೂ ಪಾದರಸದಂತೆ ಒಂದರ ಮೇಲೊಂದು ಸಾಮಾಜಿಕ ಕಾರ್ಯಕ್ರಮಗಳ ಮುಂದಾಳತ್ವ ವಹಿಸಿಕೊಂಡು ಹಿಡಿದಂತ ಕಾರ್ಯವನ್ನು ಯಶಸ್ವಿಯಾಗಿ ನಿಭಾಯಿಸಿಕೊಂಡು ಜನಮನಗಳಲ್ಲಿ ವ್ಯಕಿತ್ವ ಹಾಗೂ ಕಾರ್ಯಗಳಿಂದ ಮನ್ನಣೆ ಗಳಿಸಿಕೊಂಡು ಸಮಾಜದ ಬಹು ದೊಡ್ಡ ಆಸ್ತಿಯಾಗಿದ್ದಾರೆ. ಈ ತರಹ ಸಾಮಾಜಿಕ ಬದ್ಧತೆಯಲ್ಲಿ ತೊಡಗಿಕೊಂಡವರು ಬೇರೆ ಯಾರು ಅಲ್ಲ ನಮ್ಮ ಸಮಾಜದ ಮಲ್ಯರಬೆಟ್ಟು ನಿವಾಸಿ ಶ್ರೀಯುತ ರಾಮಪ್ಪ ಖಾರ್ವಿ.

ಗ್ರಾಮದ ಯಶಸ್ವಿ ಕಾರ್ಯಕ್ರಮದಲ್ಲಿ ಶ್ರೀಯುತರ ಪಾಲು ದೊಡ್ಡ ಮಟ್ಟದಲ್ಲಿ ಇದೆ. ಒಂದು ಸಂಸ್ಥೆಯ ಉದ್ಯೋಗಿಯಾಗಿ ಮಾಲೀಕರ ನೆಚ್ಚಿನ ಸೇವಕರಾಗಿದ್ದಾರೆ. ಇವುಗಳ ಜೊತೆಯಲ್ಲಿ ಸಮಾಜದ ದೊಡ್ಡ ಜವಾಬ್ದಾರಿ ಹೊತ್ತು ಯಶಸ್ವಿಯಾಗಿದ್ದಾರೆ. ಶ್ರೀಯುತರ ಸಾಮಾಜಿಕ ಬದ್ಧತೆ ಯಾವ ರೀತಿಯಲ್ಲಿ ಇದೆ ಅಂದರೆ ಯಾವ ಸಮಯದಲ್ಲಿ ಬೇಕಾದರೂ ಯಾವುದೇ ಸಮಸ್ಯೆ ಇದ್ದರೂ ಅವರೊಂದಿಗೆ ಜೊತೆಯಾಗಿ ನಿಲ್ಲುವವರು. ಗಂಗೊಳ್ಳಿ ಪರಿಸರದ ಬಿಜೆಪಿ ಮುಖಂಡರಾಗಿ ಪಕ್ಷ ಹಾಗೂ ಜನತೆ ಸೇವಕರಾಗಿ ಕಾರ್ಯ ನಿರ್ವಹಿಸುವ ಪರಿ ಅಮೋಘವಾಗಿದೆ.

ಹೋರಾಟದ ಬದುಕನ್ನೇ ಕಂಡಿದ ರಾಮಪ್ಪ ಖಾರ್ವಿಯವರು ಗಂಗೊಳ್ಳಿ ಬಂದರು ಹಾಗೂ ಮೀನುಗಾರರ ಸಮಸ್ಯೆಗೆ ವಿಶೇಷ ಮುತುವರ್ಜಿ ವಹಿಸುತ್ತಾರೆ. ಬಂದರಿನ ಸಮಸ್ಯೆಗಳನ್ನು ಅಧಿಕಾರಿಗಳ ಹಾಗೂ ಜನಪ್ರತಿನಿದಿಗಳ ಗಮನಕ್ಕೆ ತಂದು ಬಗೆಹರಿಸುವಲ್ಲಿ ನಿಸ್ಸಿಮರು. ನಮ್ಮ ಜನಾಂಗದ ಅಧಿದೇವತೆಯಾದ ಶ್ರೀ ಮಹಾಂಕಾಳಿ ಅಮ್ಮನವರ ದೇವಸ್ಥಾನದ ನವೀಕರಣ, ಪ್ರತಿಷ್ಠಾಪನೆ ಹಾಗೂ ಬ್ರಹ್ಮಕಲಾಶೋತ್ಸವದ ಮಹತ್ತರ ಕಾರ್ಯದಲ್ಲಿ ಶ್ರೀಯುತರು ಶ್ರೀ ದೇವಿಯ ಸಾಮಾನ್ಯ ಭಕ್ತನಾಗಿ, ಪಾದರಸದಂತೆ ಓಡಾಡಿ ಎಲ್ಲರಿಗೂ ಸ್ಪೂರ್ತಿಯಾಗಿ, ಎಲ್ಲರನ್ನೂ ಒಗ್ಗೂಡಿಸಿಕೊಂಡು ಅಲ್ಪ ಸಮಯದಲ್ಲಿ ದೊಡ್ಡ ಯಶಸ್ಸನ್ನು ದೊರೆಕಿಸಿಕೊಡುವಲ್ಲಿ ಮಹತ್ತರ ಪಾತ್ರವನ್ನು ವಹಿಸಿದ್ದಾರೆ. ಶ್ರೀ ಮಹಾಂಕಳಿ ಅಮ್ಮನವರ ದೇವಸ್ಥಾನದ ಸಮಿತಿಯು ಈ ಕಾರ್ಯಕ್ರಮವನ್ನು ನಿಭಾಯಿಸಿದ ರೀತಿಗೆ ಸಮಾಜ ಹಾಗೂ ಇನ್ನಿತರ ಸಮಾಜ ಕೂಡಾ ತಲೆದೂಗಿದೆ. ಈ ಮನ್ನಣೆಗೆ ರಾಮಪ್ಪ ಖಾರ್ವಿ ಯವರು ಕೂಡಾ ಅರ್ಹರಲ್ಲಿ ಅಗ್ರಾಪಂಕ್ತಿಯಲ್ಲಿ ನಿಲ್ಲುತ್ತಾರೆ.

ಮಲ್ಯರಬೆಟ್ಟು ಗಂಗೊಳ್ಳಿಯ ಗ್ರಾಮ ಜಟ್ಟಿಗ ಸೇವಾ ಸಮಿತಿ ಹಾಗೂ ಹೋಳಿ ಉತ್ಸವ ಸಮಿತಿಯ ಅಧ್ಯಕ್ಷರಾಗಿ ಸಮಿತಿಯ ಜೊತೆ ಸೇರಿ ಅಲ್ಲಿನ ಜವಾಬ್ದಾರಿ ಕೂಡಾ ಅಚ್ಚು ಕಟ್ಟಾಗಿ ನಿಭಾಯಿಸಿಕೊಂಡು ಬಂದಿರುತ್ತಾರೆ. ಇದರ ಮಧ್ಯ ಶ್ರೀ ಗ್ರಾಮ ಜಟ್ಟಿಗ ದೇವಸ್ಥಾನಕ್ಕೆ ಸಮುದಾಯ ಭವನ ನಿರ್ಮಿಸಲು ಬೈಂದೂರು ಶಾಸಕರ ಹಾಗೂ ಸಂಸದರ ಶಿಫಾರಸ್ಸಿನಲ್ಲಿ ರೂ.40 ಲಕ್ಷದ ಅನುದಾನವನ್ನು ಸಮಿತಿಯೊಂದಿಗೆ ಜೊತೆಗೂಡಿ ತಂದು ಸುಸಜ್ಜಿತ ಕಟ್ಟಡವನ್ನು ಕಟ್ಟಿ ಉದ್ಘಾಟನೆಗೆ ಸಜ್ಜಾಗಿ ನಿಲ್ಲುವಂತೆ ಮಾಡಿದ್ದಾರೆ. ಸಮಾಜ ಹಾಗೂ ಊರಿನ ಅನೇಕ ಸಂಸ್ಥೆಗಳಲ್ಲಿ ಹಲವಾರು ಜವಾಬ್ದಾರಿಗಳನ್ನ ನಿಭಾಯಿಸಿ ಸೈ ಎನ್ನಿಸಿಕೊಂಡವರು. ಸಮಾಜದ ಜೊತೆಗೆ ಇರುವ ಅನುಬಂಧದ ಒಡನಾಟ, ಜನಸಾಮಾನ್ಯರಂತೆ ಇರುವ ಅವರ ವ್ಯಕ್ತಿತ್ವ, ಸದಾ ಜನ ಸೇವಕರಾಗಿ ಇರಬೇಕೆನ್ನುವ ಅವರ ಮನದ ತುಡಿತದಿಂದಾಗಿ ಶ್ರೀ ಮಹಾಂಕಾಳಿ ಅಮ್ಮನವರ ಅನುಗ್ರಹ ಅವರಿಗೆ ಶ್ರೀ ರಕ್ಷೆಯಾಗಿದೆ.

ಬರೆದಷ್ಟು ಖಾಲಿಯಾಗದ ಗುಣ ಶ್ರೀ ರಾಮಪ್ಪ ಖಾರ್ವಿಯವರದು. ಶ್ರೀ ಯುತ ರಾಮಪ್ಪ ಖಾರ್ವಿಯವರ ಮುಂದಿನ ಜೀವನ ಹೀಗೆ ಸಮಾಜಮುಖಿಯಾಗಿ ಆಯುರಾರೋಗ್ಯದಿಂದ ಉತ್ತೋರೋತ್ತರ ಅಭಿವೃದ್ಧಿ ಹೊಂದಲಿ ಎಂದು ಜಗನ್ಮಾತೆಯಾದ ಮಹಾಂಕಾಳಿ ಅಮ್ಮನವರಲ್ಲಿ ಪ್ರಾರ್ಥಿಸುತ್ತೇನೆ.

ನಾಗೇಶ ಖಾರ್ವಿ, ಕಂಚುಗೂಡು

Leave a Reply

Your email address will not be published. Required fields are marked *