ಕುಂದಾಪುರ ಖಾರ್ವಿಕೇರಿ ಶ್ರೀ ಮಹಾಕಾಳಿ ದೇವಸ್ಥಾನದ ಮಹಾರಾಜ ಗಣಪತಿಯ ವೈಭವದ ವಿಸರ್ಜನಾ ಮೆರವಣಿಗೆ

ಹೊಸ ಇತಿಹಾಸ ಸೃಷ್ಟಿಸಿದ ಕುಂದಾಪುರ ಖಾರ್ವಿಕೇರಿ ಶ್ರೀ ಮಹಾಕಾಳಿ ದೇವಸ್ಥಾನದ ಗಣಪತಿಯ ವೈಭವದ ಪುರಮೆರವಣಿಗೆ ಪಂಚಗಂಗಾವಳಿಯಲ್ಲಿ ಜಲಸ್ಥಂಬನ, ಕುಂದಾಪುರದ ಖಾರ್ವಿಕೇರಿ ಶ್ರೀ ಮಹಾಕಾಳಿ ದೇವಸ್ಥಾನದಲ್ಲಿ ಪಂಚದಿನಾತ್ಮಕವಾಗಿ ಆಚರಿಸಲ್ಪಟ್ಟ ಮಹಾರಾಜ ಗಣಪತಿಯ ವಿಸರ್ಜನಾ ಮೆರವಣಿಗೆಯು ಇಂದು ಕುಂದಾಪುರದ ಪ್ರಮುಖ ರಸ್ತೆಯಲ್ಲಿ ರಾಜವೈಭವದಿಂದ ನಡೆಯಿತು.

ಮಹಾರಾಜನ ಠೀವಿಯಲ್ಲಿ ಅಪೂರ್ವ ಪುಷ್ಪಾಲಂಕೃತವಾದ ವಾಹನದಲ್ಲಿ ವಿರಾಜಮಾನವಾಗಿ ಕಂಗೊಳಿಸುತ್ತಿದ್ದ ಗಣಪತಿಯನ್ನು ಕಣ್ತುಂಬಿಕೊಳ್ಳುಲು ರಸ್ತೆಯ ಇಕ್ಕೆಲಗಳಲ್ಲಿ, ಕಟ್ಟಡಗಳಲ್ಲಿ ಅಪಾರ ಜನಸ್ತೋಮ ನೆರೆದಿತ್ತು. ಮೆರವಣಿಗೆಯಲ್ಲಿ ಅಪಾರ ಪ್ರಮಾಣದಲ್ಲಿ ಜನಸಾಗರವೇ ನೆರೆದಿದ್ದರು. ಮೆರವಣಿಗೆಯಲ್ಲಿ ಗಂಗೊಳ್ಳಿಯ ಮಹಾಂಕಾಳಿ ಚೆಂಡೆ ಬಳಗ ಮತ್ತು ಕುಂದಾಪುರದ ಮಹಾಕಾಳಿ ಚೆಂಡೆ ಬಳಗ ಆಕರ್ಷಕ ಚೆಂಡೆ ನೃತ್ಯ ಪ್ರದರ್ಶನದಿಂದ ಮೆರುಗನ್ನು ನೀಡಿತು. ಡಿಜೆ ಸೌಂಡ್ ಗೆ ಜನ ಹುಚ್ಚೆದ್ದು ಕುಣಿದರು.

ಕುಂದಾಪುರದ ಮಹಾರಾಜ ಖಾರ್ವಿಕೇರಿಯ ಶ್ರೀ ಮಹಾಕಾಳಿ ದೇವಸ್ಥಾನದ ಗಣಪತಿಯ ವೈಭವದ ಪುರಮೆರವಣಿಗೆಯ ಬಳಿಕ ಕೋಟೆಬಾಗಿಲು ಬಳಿ ಪುಣ್ಯ ನದಿ ಪಂಚಗಂಗಾವಳಿಯಲ್ಲಿ ಭಕ್ತಸಮೂಹದ ಜಯಘೋಷ, ವರ್ಣರಂಜಿತ ಸಿಡಿಮದ್ದುಗಳ ಪ್ರದರ್ಶನದೊಂದಿಗೆ ಜಲಸ್ಥಂಬನ ಮಾಡಲಾಯಿತು. ಮಹಾರಾಜ ಗಣಪತಿಯನ್ನು ಪುಣ್ಯನದಿ ಪಂಚಗಂಗಾವಳಿ ತನ್ನೊಡಲಲ್ಲಿ ವೀನಿತಭಾವದಿಂದ ಸೇರಿಸಿಕೊಂಡಿತು. ಪಡುವಣದಲ್ಲಿ ಸೂರ್ಯ ನೀಲಿಮೆಯ ಹರವಿನಲ್ಲಿ ಪವಡಿಸುತ್ತಿದ್ದಂತೆ ಪರಮ ಪಾವನೆ ಪಂಚಗಂಗಾವಳಿಯಲ್ಲಿ ಸಿಂಧೂರ ವದನ ಲೀನವಾದನು. ಕುಂದಾಪುರಲ್ಲಿ ಅಭೂತಪೂರ್ವ ಇತಿಹಾಸ ಸೃಷ್ಟಿಸಿದ ಖಾರ್ವಿಕೇರಿಯ ಶ್ರೀ ಮಹಾರಾಜ ಗಣಪತಿಯ ವಿಸರ್ಜನಾ ಕಾರ್ಯ ನಡೆದು ಐದು ದಿನಗಳ ಕಾಲದ ವೈಭವದ ಶ್ರೀ ಗಣೇಶೋತ್ಸವ ಅಭೂತಪೂರ್ವವಾಗಿ ಸಂಪನ್ನಗೊಂಡಿತು.

ಕುಂದಾಪುರ ಖಾರ್ವಿಕೇರಿ ಶ್ರೀ ಮಹಾಕಾಳಿ ದೇವಸ್ಥಾನದಲ್ಲಿ ಪಂಚದಿನಾತ್ಮಕವಾಗಿ ಪೂಜಿಸಲ್ಪಟ್ಟ ಮಹಾರಾಜ ಗಣಪತಿಯ ವಿಸರ್ಜನೆ ಮಾಡಲು ಕುಂದಾಪುರದ ಇತಿಹಾಸದಲ್ಲೇ ಅಭೂತಪೂರ್ವ ರಾಜವೈಭವದ ಮೆರವಣಿಗೆ ನಡೆದಿದ್ದು, ಈ ರಾಜವೈಭವದ ಪುರ ಮೆರವಣಿಗೆ ಯಶಸ್ವಿಯಾಗಲು ಸಹಕರಿಸಿದ ಸಮಾಜ ಭಾಂಧವರು ಮತ್ತು ಭಕ್ತ ಮಹಾಶಯರಿಗೆ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಸುಧೀರ್ ನಾಯ್ಕ್ ರವರು ಹೃತ್ಪೂರ್ವಕ ಧನ್ಯವಾದಗಳನ್ನು ಸಮರ್ಪಿಸಿದ್ದಾರೆ.

ಸುಧಾಕರ್ ಖಾರ್ವಿ
Editor
www.kharvionline.com

Leave a Reply

Your email address will not be published. Required fields are marked *