ಯಾರು ಈ ಬಾರ್ಬರಿಕ..?

ಕುರುಕ್ಷೇತ್ರದ ಯುದ್ಧವನ್ನು ಒಂದೇ ಬಾಣದಲ್ಲಿ ಒಂದೇ ನಿಮಿಷದಲ್ಲಿ ಮುಗಿಸಿತ್ತೀನಿ ಅಂತ ಹೇಳಿದ ಮಹಾಶೂರ ಯಾರಿವನು ???

ಉತ್ತಮ ಜೀವನ ಮಾರ್ಗ ಮೌಲ್ಯವನ್ನು ಹೇಳಿಕೊಟ್ಟ ಮಹಾಭಾರತದಂತಹ ಮಹಾಕಾವ್ಯ ಜಗತ್ತಿನಲ್ಲಿ ಮುಂದೆ ಇನ್ನೊಂದು ಹುಟ್ಟಲೂ ಸಾಧ್ಯವಿಲ್ಲ….

ನಾವು ಸಿನಿಮಾದ ಕಥೆಗಳನ್ನು ಕೇಳಿದಾಗ ಹೀರೋ ಒಬ್ಬನೇ ಬಲಾಢ್ಯವಾಗಿರುತ್ತಾನೇ. ಎಲ್ಲಾ ಕಥೆ ಪಾತ್ರಗಳಲ್ಲಿ ಹಾಗೇ ಹೀರೋ ಗಳೇ ಶಕ್ತಿಶಾಲಿ, ಅವನಿಗಿಂತ ಶಕ್ತಿ ಶಾಲಿ ಬೇರೆ ಯಾರು ಇರಲ್ಲ…ಆದರೆ ಮಹಾಭಾರತದಲ್ಲಿ ಹಾಗಲ್ಲ, ಹೆಚ್ಚಿನವರು ಭೀಮ ಅರ್ಜುನ ಇಬ್ಬರೇ ಮಹಾ ಶಕ್ತಿ ಶಾಲಿ‌ ಅವರೇ ಯುದ್ದವನ್ನು ಗೆಲ್ಲುವ ಶಕ್ತಿ ಹೊಂದಿದ್ದಾರೆ ಅಂತ ತಿಳಿಕೊಂಡಿದ್ದಾರೆ ಹಾಗೆ ಅಂದುಕೊಂಡಿದ್ದಾರೆ ನಿಮ್ಮ ಊಹೆ ತಪ್ಪು

ಇಲ್ಲಿ ಒಬ್ಬರಿಗಿಂತ ಮತ್ತೊಬ್ಬರು ಬಲಾಢ್ಯ ಅತಿರಥ ಮಹಾರಥರು ಇದ್ದರು….ಅವರ ಎದುರು ಭೀಮ ‌ಅರ್ಜುನರು ಯಾವ ಲೆಕ್ಕವೂ ಇರಲಿಲ್ಲ. ಅಂತಹ ಬಲಾಢ್ಯ ಮಹಾವೀರರಲ್ಲಿ ಬಾರ್ಬರೀಕ ಕೂಡ ಒಬ್ಬ.

ಕುರುಕ್ಷೇತ್ರದ ಮಹಾಯುದ್ಧವನ್ನು ಒಂದೇ ಬಾಣದಲ್ಲಿ ಒಂದೇ ನಿಮಿಷದಲ್ಲಿ ಕೊನೆಗೊಳ್ಳಿಸುತ್ತೇನೆಂದು ಹೇಳಿದ, ಈತ ಮಹಾ ಶೂರನಾಗಿದ್ದ. ಸಾಮಾನ್ಯ ಶೂರನಲ್ಲ ಕೇವಲ ಮೂರೇ ಮೂರು ಬಾಣ ಹಿಡ್ಕೊಂಡು ಓಡಾಡುತ್ತಿದ್ದ ಈತ ಒಂದೇ ಒಂದು ಬಾಣದಿಂದ ಇಡೀ ಮಹಾಭಾರತ ಯುದ್ದವನ್ನೇ ಗೆಲ್ಲುವ ಶಕ್ತಿ ಹೊಂದಿದ್ದ.ಆದರೂ ಧರ್ಮದ ಸ್ಥಾಪನೆಗಾಗಿ ಈತನನ್ನು ಕೂಡ ಶ್ರೀಕೃಷ್ಣ ಕೊಲ್ಲಬೇಕಾಯಿತು. ಬಾರ್ಬರೀಕ ಈ ಹೆಸರೇ ವಿಚಿತ್ರ ಇದೆಯಲ್ಲ ಯಾರಿವ ? ಮಹಾ ಶೂರ ಅಂತ ಅಂತರ್ಜಾಲದಲ್ಲಿ ಹುಡುಕಾಡಿದಾಗ ಈ ಶೂರರ ಸ್ವಲ್ಪ ಬಗ್ಗೆ ಮಾಹಿತಿ ದೊರೆಯಿತು. ಭೀಮಾ ಮತ್ತು ಹಿಡಿಂಬೆ ಪುತ್ರ ಘಟೋತ್ಕಚ. ಘಟೋತ್ಕಚನ ಮತ್ತು ಮೌರ್ವಿ ದಂಪತಿಗಳ ಮಗನೇ ಬಾರ್ಬರೀಕ.

ಮಹಾಭಾರತ ಯುದ್ಧಕ್ಕೆ ಎಲ್ಲ ರೀತಿಯ ತಯಾರಿ ನಡೆದಿತ್ತು ,ಬಾರ್ಬರಿಕ್ ತಾನು ಸಹ ಮಹಾಭಾರತ ಯುದ್ಧದಲ್ಲಿ ಭಾಗಿಯಾಗಲು ಮೂರು ಬಾಣಗಳನ್ನು ಹಿಡ್ಕೊಂಡು ಕುರುಕ್ಷೇತ್ರದ ಕಡೆಗೆ ಹೊರಡುತ್ತಾನೆ.ಶ್ರೀಕೃಷ್ಣ ಪರಮಾತ್ಮನಿಗೆ ಬಾರ್ಬರಿಕ್ ಶಕ್ತಿ ಬಗ್ಗೆ ಚೆನ್ನಾಗಿ ಗೊತ್ತಿರುತ್ತೆ .

ಬಾರ್ಬರಿಕ್ ಮಹಾಭಾರತ ಯುದ್ಧದಲ್ಲಿ ಭಾಗಿಯಾಗಲು ಬರ್ತಾ ಇರುವುದನ್ನು ತನ್ನ ದಿವ್ಯ ದೃಷ್ಟಿಯಿಂದ ಕಂಡ ಶ್ರೀಕೃಷ್ಣನಿಗೆ ಚಿಂತೆಯಾಗುತ್ತದೆ ಯಾಕಂದ್ರೆ ಬಾರ್ಬರಿಕ್ ಯುದ್ಧದಲ್ಲಿ ಭಾಗಿಯಾಗಿದರೆ ಯಾರೂ ಸೋಲುವ ಸ್ಥಿತಿಯಲ್ಲಿರುತ್ತಾರೋ ಅವರ ಪರ ಹೋರಾಡ್ತ ಇದ್ದ ಯಾಕೆಂದ್ರೆ ತಾನು ಯಾವಾಗಲೂ ದುರ್ಬಲರ ಪರವಾಗಿಯೇ ಹೋರಾಡುತ್ತೇನೆ ಅಂತ ಪ್ರತಿಜ್ಞೆ ಮಾಡಿದ್ದ.

ಅದೇ ರೀತಿ ಮಹಾಭಾರತ ಯುದ್ಧದಲ್ಲಿ ಕೌರವರು ದುರ್ಬಲರಾಗಿ ಸೋಲುವ ಸ್ಥಿತಿ ತಲುಪಿದಾಗ ಅವರ ಪರ ಬಾರ್ಬರಿಕ್ ಹೋರಾಡಿದ್ರೆ ಪಾಂಡವರ ಸೋಲು ನಿಶ್ಚಿತವಾಗಿತ್ತು.ಹೀಗಾಗಿ ಶ್ರೀಕೃಷ್ಣ ಬಾರ್ಬರಿಕ್ ನನ್ನು ಮಾರ್ಗ ಮಧ್ಯದಲ್ಲೇ ತಡೆಯುತ್ತಾನೆ.

ಬಾರ್ಬರಿಕ ಕೇವಲ ಯೋಧನಲ್ಲದೆ ಆತನು ಶ್ರೀ ಪರಮೇಶ್ವರನ ಉತ್ಕಟ ಭಕ್ತನಾಗಿ ಅವನು ಭಗವಾನ್ ಪರಮೇಶ್ವರನನ್ನು ಮೆಚ್ಚಿಸುವ ಸಲುವಾಗಿ ಘೋರ ತಪಸ್ಸನ್ನು ಮಾಡಿ ಶಿವನಿಂದ ಅವನು ಮಾಂತ್ರಿಕ ಶಕ್ತಿಗಳನ್ನು ಹೊಂದಿದ ಮೂರು ಬಾಣಗಳನ್ನು ಪಡೆದನು. ಮೊದಲನೆ ಬಾಣದಿಂದ ಈಗಿನ ತಂತ್ರಜ್ಞಾನ ಹಾಗೇ ವೈರಿಗಳ ಯುದ್ಧ ಕ್ಷಿಪಣಿಗಳನ್ನು ರೇಡಾರ್ ನಿಂದ ಗುರುತಿಸಿ ಕ್ಷಿಪಣಿ ದಾಳಿ ಮಾಡಿದ್ದಾಂಗೆ, ಅವನು ನಾಶಪಡಿಸಬೇಕೆಂದಿರುವ ಶತ್ರುಗಳನ್ನು ಗುರುತಿಸಿಕೊಳ್ಳಬಹುದಾಗಿತ್ತು. ಮೂರನೇ ಬಾಣವನ್ನು ಉಪಯೋಗಿಸಿ ಎಲ್ಲಾ ಗುರುತಿಸಿರುವ ಶತ್ರುಗಳನ್ನು ನಾಶಪಡಿಸಿ ಆ ಬಾಣವು ಮತ್ತೆ ಅವನ ಬತ್ತಳಿಕೆಗೆ ಮರಳಬಹುದಾಗಿತ್ತು. ಎರಡನೇ ಬಾಣದಿಂದ ಅವನು ಯಾವ ಯಾವ ಯೋಧರನ್ನು ಮತ್ತು ವಸ್ತುಗಳನ್ನು ನಾಶಪಡಿಸದೇ ಅವರನ್ನು ಗುರುತಿಸಿ ಉಳಿಸಿಕೊಳ್ಳಬಹುಗಿತ್ತು. ನಂತರ ಮೂರನೇ ಬಾಣದಿಂದ ಗುರುತು ಮಾಡಿದ್ದ ಶತ್ರುಗಳನ್ನು ಮತ್ತು ವಸ್ತುಗಳನ್ನು ನಾಶಪಡಿಸಬಹುದಾಗಿತ್ತು. ಅರ್ಥಾತ್, ಅವನು ಒಂದೇ ಬಾಣದಿಂದ ನಾಶಪಡಿಸಬೇಕೆಂದುಕೊಂಡಿರುವ ಎಲ್ಲಾ ಶತ್ರುಗಳು ಮತ್ತು ವಸ್ತುಗಳನ್ನು ಒಮ್ಮೆಯೇ ನಾಶಪಡಿಸುವ ಶಕ್ತಿಯಿತ್ತು. ಹೀಗಾಗಿ ಬಾರ್ಬರಿಕಾಗೆ ‘ತ್ರಿಬಾಣಧಾರಿ’ ಅಥವ ಮೂರು ಬಾಣಗಳನ್ನು ಹೊಂದಿದವನೆಂಬ ಹೆಸರಾಯಿತು.

ಶ್ರೀಕೃಷ್ಣನಿಗೆ ಬಾರ್ಬರಿಕ ಇಂತಹ ವರವನ್ನು ಪಡೆದಿರುವುದನ್ನು ಕೇಳಿ, ಅವನನ್ನು ಪರೀಕ್ಷಿಸಲು ನಿರ್ಧಾರ ಮಾಡಿದನು. ನೀನು ಅದು ಹೇಗೆ ಕೇವಲ ಮೂರು ಬಾಣಗಳಿಂದ ಯುದ್ಧದಲ್ಲಿ ಹೋರಾಟ ಮಾಡುತ್ತೀಯಾ, ಅದು ಹೇಗೆ ಸಾಧ್ಯ ಎಂದು ಗೇಲಿ ಮಾಡಿದನು. ಅದಕ್ಕೆ ಅವನು ಶ್ರೀಕೃಷ್ಣನನ್ನು ಕಾಡಿಗೆ ಕರೆದುಕೊಂಡು ಹೋಗಿ ಅಲ್ಲಿ ಒಂದು ಮರದಲ್ಲಿರುವ ಎಲ್ಲಾ ಎಲೆಗಳ ಮೇಲೆ ಪ್ರಯೋಗ ಮಾಡಲು ಗುರಿಯಿಟ್ಟನು. ಬಾರ್ಬರಿಕ ಕಣ್ಣುಮುಚ್ಚಿರುವಾಗ ಕ್ಷಣಮಾತ್ರದಲ್ಲಿ ಶ್ರೀಕೃಷ್ಣನು ಒಂದು ಎಲೆಯನ್ನು ಕಿತ್ತು ತನ್ನ ಕಾಲಿನಡಿಯಲ್ಲಿ ಬಾರ್ಬರಿಕಾಗೆ ಕಾಣದ ಹಾಗೆ ಇಟ್ಟು ಮುಚ್ಚಿಕೊಂಡುಬಿಟ್ಟನು. ಬಾರ್ಬರಿಕ ಪ್ರಯೋಗಿಸಿದ ಮೊದಲನೇ ಬಾಣವು ಮರದಲ್ಲಿದ್ದ ಎಲ್ಲ ಎಲೆಗಳನ್ನು ಗುರುತಿಸಿ ನಂತರ ಶ್ರೀಕೃಷ್ಣನ ಪಾದದಡಿಯಲ್ಲಿರುವ ಎಲೆಯನ್ನು ಗುರುತಿಸಲು ನುಗ್ಗಿ ಬಂದಿತು. ಶ್ರೀಕೃಷ್ಣನಿಗೆ ಅಚ್ಚರಿಯಾಗಿ ತನ್ನ ಪಾದವನ್ನು ಎತ್ತಿದ ತಕ್ಷಣವೆ ಆ ಬಾಣವು ಆ ಎಲೆಯನ್ನೂ ಗುರುತುಮಾಡಿಕೊಂಡಿತು. ನಂತರ ಬಾರ್ಬರಿಕ ತನ್ನ ಮೂರನೆ ಬಾಣವನ್ನು ಪ್ರಯೋಗಿಸಿದಾಗ ಆ ಮರದಲ್ಲಿದ್ದ ಎಲ್ಲಾ ಎಲೆಗಳನ್ನು ಸಂಗ್ರಹಿಸಿ ಬಂಧಿಸಿತು.

ಬಾರ್ಬರಿಕಾಗೆ ತಾನು ಪಡೆದಿದ್ದ ವರಕ್ಕೆ ಎರಡು ಷರತ್ತುಗಳಿದ್ದವು. ಅವನು ಅದನ್ನು ತನ್ನ ವೈಯುಕ್ತಿಕ ದ್ವೇಷವನ್ನು ಸಾಧಿಸಲು ಉಪಯೋಗಿಸಬಾರದು ಮತ್ತು ಸದಾ ಒಂದು ಯುದ್ಧದ ರಣರಂಗದಲ್ಲಿ ದುರ್ಬಲವಾಗಿರುವ ಸೈನ್ಯ ಪಡೆಯ ಕಡೆಯಿಂದ ಮಾತ್ರ ಉಪಯೋಗಿಸಬೇಕು.

ಶ್ರೀಕೃಷ್ಣನು ಆ ಬಾಣಗಳ ಶಕ್ತಿಯನ್ನು ನೋಡಿ, ಕುರುಕ್ಷೇತ್ರದ ಯುದ್ಧದಲ್ಲಿ ನೀನು ಯಾರ ಪಕ್ಷದ ಕಡೆಯಿಂದ ಯುದ್ಧ ಮಾಡಲಿದ್ದೀಯಾ ಎಂದು ಕೇಳಿದನು. ಬಾರ್ಬರಿಕ ತಾನು ಕೌರವ ಪಕ್ಷವನ್ನು ಪಾಂಡವ ಪಕ್ಷಕ್ಕೆ ಹೋಲಿಸಿದಾಗ ಪಾಂಡವ ಪಕ್ಷವು ದುರ್ಬಲರಾಗಿರುವುದರಿಂದ ಅವರಕಡೆಯಿಂದಲೇ ಖಂಡಿತವಾಗಿ ಹೋರಾಡುತ್ತೇನೆಂದು ಹೇಳಿದನು. ಆದರೆ ಅವನು ಪಾಂಡವ ಪಕ್ಷದ ಕಡೆಯಿಂದ ಯುದ್ಧಮಾಡಿದರೆ, ಪಾಂಡವರು ತಾನಾಗಿಯೇ ಬಲಶಾಲಿಗಳಾಗುತ್ತಾರೆಯೆಂದು ಮತ್ತು ಆಗ ಕೌರವರು ದುರ್ಬಲರಾಗುತ್ತರೆಂದು ಶ್ರೀಕೃಷ್ಣನು ಹೇಳಿದನು. ಇದನ್ನು ಕೇಳಿ ಬಾರ್ಬರಿಕಾಗೆ ಒಂದು ಸಂದಿಗ್ಧತೆಯುಂಟಾಗಿ ಹೋಯಿತು. ಅವನ ಬಾಣದ ಷರತ್ತುಗಳನ್ನು ಪೂರೈಸಲು ಬಲ ಮತ್ತು ದುರ್ಬಲಗೊಳ್ಳುವ ಎರಡೂಕಡೆಯಿಂದ ಯುದ್ಧಮಾಡಬೇಕಾಗುತ್ತದೆ. ಅವನು ಯಾವ ಪಕ್ಷದ ಪರ ಯುದ್ಧ ಮಾಡಿದರೂ ಆ ಪಕ್ಷ ಬಲಶಾಲಿಗಳಗುತ್ತಾರೆ ಮತ್ತೊಂದು ಪಕ್ಷವು ಬಲಹೀನರಾಗುತ್ತಾರೆ. ಹಾಗಾದಾಗ ತಕ್ಷಣವೇ ತಾನು ಹೋರಾಡುತ್ತಿದ್ದ ಬಲಶಾಲಿ ಪಕ್ಷವನ್ನು ಬಿಟ್ಟು ದುರ್ಬಲಶಾಲಿ ಪಕ್ಷದ ಕಡೆಯಿಂದ ಹೋರಾಡಬೇಕು. ಹೀಗೆ ಮಾಡುತ್ತಿದ್ದರೆ ತಾನು ತನ್ನ ಶಕ್ತಿಯನ್ನು ಉಪಯೋಗಿಸಲು ಆಗುವುದೇ ಇಲ್ಲ. ಆದ್ದರಿಂದ ಮಾನವಕುಲದ ರಕ್ಷಣೆಗಾಗಿ ತನ್ನ ಪ್ರಾಣವನ್ನು ಕಳೆದುಕೊಳ್ಳಬೇಕೆಂದು ಮನವರಿಕೆಯಾಯಿತು.

ಹೀಗಾಗಿ ಒಂದು ನಿಜವಾದ ಯುದ್ಧದಲ್ಲಿ ತಾನು ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಹೊಯ್ದಾಡುವ ಸಂದರ್ಭ ಬಂದು, ಕೊನೆಗೆ ಎರಡೂ ಸಂಪೂರ್ಣ ಸೈನ್ಯವನ್ನು ನಾಶಮಾಡಿ, ತಾನೊಬ್ಬನೇ ಉಳಿಯುವನೆಂಬ ಮನವರಿಕೆಯಾಯಿತು. ಕೊನೆಗೆ ಯಾವ ಪಕ್ಷವೂ ಜಯಸಾಧಿಸದೇ ಅವನೊಬ್ಬನೇ ಉಳಿಯುವ ಹಾಗಾಗುತ್ತದೆ. ಆದ್ದರಿಂದ ಶ್ರೀಕೃಷ್ಣನು ಉಪಾಯಮಾಡಿ ಅವನಲ್ಲಿ ಒಂದು ಭಿಕ್ಷೆಯನ್ನು ಬೇಡಿದನು. ಅದಕ್ಕೆ ಬಾರ್ಬರಿಕ ತಾನು ಏನು ಕೇಳಿದರೂ ಕೊಡಲು ಸಿದ್ಧನಿದ್ದೇನೆಂದು ಹೇಳಿದನು. ತಕ್ಷಣವೇ ಶ್ರೀಕೃಷ್ಣನು ಅವನ ತಲೆಯನ್ನು ದಾನವಾಗಿ ಕೇಳಿದಾಗ, ಆಗ ಬಾರ್ಬರಿಕ್ ತನ್ನ ತಲೆಯನ್ನೇ ಕತ್ತರಿಸಿ ಕೊಡುತ್ತಾನೆ.ಈ ಮೂಲಕ ಭಗವಂತನಿಂದಲೇ ಮುಕ್ತಿ ಪಡೆಯುವ ತನ್ನ ಉದ್ದೇಶವನ್ನು ಈಡೇರಿಸಿಕೊಳ್ಳುತ್ತಾನೆ ಆದ್ರೆ ತಲೆ ಕತ್ತರಿಸಿ ಕೊಡುವ ಮುನ್ನ ಕೃಷ್ಣನ ಬಳಿ ತನ್ನ ಕೊನೆಯ ಆಸೆಯನ್ನು ಕೂಡ ಹೇಳಿಕೊಳ್ಳುತ್ತಾನೆ.ನನಗಂತೂ ಈ ಯುದ್ಧದಲ್ಲಿ ಭಾಗಿಯಾಗಲು ಸಾಧ್ಯವಾಗ್ತಿಲ್ಲ ಆದ್ರೆ ಈ ಸಂಪೂರ್ಣ ಯುದ್ಧವನ್ನು ನಾನು ನೋಡಲೇ ಬೇಕು ಅನ್ನೋದು ನನ್ನ ಆಸೆ ಆಗಿತ್ತು ಹೀಗಾಗಿ ದಯವಿಟ್ಟು ನನಗೆ ಇಡೀ ಯುದ್ಧವನ್ನು ನೋಡಲು ಅನುವು ಮಾಡಿಕೊಡಿ ಅಂತ ಕೇಳಿಕೊಳ್ತಾನೆ.

ಅದಕ್ಕೆ ತಥಾಸ್ತು ಎನ್ನುವ ಶ್ರೀ ಕೃಷ್ಣ ಬಾರ್ಬರಿಕ್ ರುಂಡ ಮಹಾಭಾರತ ಯುದ್ಧ ಮುಗಿಯುವವರೆಗೆ ಜೀವಂತವಾಗಿರುವಂತೆ ವರ ನೀಡುತ್ತಾರೆ ಅಲ್ಲದೆ ಬಾರ್ಬರಿಕ್ ತಲೆಯನ್ನು ಯುದ್ಧಭೂಮಿ ಸರಿಯಾಗಿ ಕಾಣುವಂತೆ ಎತ್ತರದ ಬೆಟ್ಟವೊಂದರಲ್ಲಿ ಇರಿಸುತ್ತಾರೆ.ಅದರಂತೆ ಬಾರ್ಬರಿಕ್ 18 ದಿನವೂ ಮಹಾಭಾರತದ ಮಹಾ ಸಂಘರ್ಷವನ್ನು , ಮಹಾಯುದ್ಧವನ್ನು ಸಂಪೂರ್ಣವಾಗಿ ನೋಡಿದ್ದ.

ಯುದ್ಧ ಮುಗಿದ ನಂತರ ಪಾಂಡವರಲ್ಲಿ ಯುದ್ಧದ ” ಮ್ಯಾನ್ ಆಫ ದಿ ಮ್ಯಾಚ್ ” ಯಾರು ಅಂತ ಭಾರಿ ಚರ್ಚೆ ಶುರುವಾಗುತ್ತದೆ ಎಲ್ಲರೂ ತಾನೇ ಹೀರೋ ಅಂತ ಫೋಸ್ ಕೊಡುತ್ತಿರುವಾಗ ಶ್ರೀ ಕೃಷ್ಣ ಬಾರ್ಬರೀಕ ನ ತಲೆಗೆ ಕೇಳುತ್ತಾನೆ. ಅದಕ್ಕೆ ಉತ್ತರವಾಗಿ ಬರ್ಬರೀಕ, “ಪರಮಾತ್ಮ! ಇಲ್ಲಿ ಯಾರ ಶಕ್ತಿ, ಯಾರ ಪರಾಕ್ರಮ ಎಂಬುದು ಮುಖ್ಯವಲ್ಲ. ಪಾಂಡವರು ಜಯಗಳಿಸಲು ಕಾರಣ ಕೇವಲ ನಿನ್ನ ಅನುಗ್ರಹ ಮಾತ್ರ. ಕೌರವರು ತಮ್ಮ ದಾಯಾದಿ ಮತ್ಸರ, ದ್ವೇಷಾಸೂಯೆಗಳಿಂದ ಅವನತಿ ಹೊಂದಿದರಷ್ಟೇ” ಅನ್ನುತ್ತಾನೆ. ಅವನ ಉತ್ತರದಿಂದ ಸಂತುಷ್ಟನಾದ ಶ್ರೀಕೃಷ್ಣ, “ನಿನಗೆ ಸದ್ಗತಿ ಪ್ರಾಪ್ತಿಯಾಗಿ, ನೀನು ಮೋಕ್ಷವನ್ನು ಹೊಂದು. ನಿನ್ನ ಶೌರ್ಯ ಪರಾಕ್ರಮಗಳು ಮತ್ತು ಪ್ರಜ್ಞೆಗಳಿಂದಾಗಿ ಜನ ನಿನ್ನನ್ನು ಪೂಜಿಸುವಂತಾಗಲಿ” ಎಂದು ಹರಸುತ್ತಾನೆ.

ಅದರಂತೆ ಬರ್ಬರೀಕನ ಶಿರಸ್ಸು ಲಯಗೊಂಡು ಅವನಿಗೆ ಮೋಕ್ಷ ಪ್ರಾಪ್ತಿಯಾಗುತ್ತದೆ. ಉತ್ತರ ಭಾರತದಲ್ಲಿ ಘಟೋತ್ಕಚನಂತೆ ಬರ್ಬರೀಕನೂ ಪೂಜೆಗೊಳ್ಳುತ್ತಾನೆ. ಇವನನ್ನು ‘ಬರ್ಬರಿ’ ಎಂದೂ ಕರೆಯಲಾಗುತ್ತದೆ. ಹಿಮಾಚಲ ಪ್ರದೇಶದಲ್ಲಿ ಬಾರ್ಬರೀಕನನ್ನು ಕಮ್ರುನಾಗ್ ಮತ್ತು ರತನ್ ಯಕ್ಷ ಎಂದು ಪೂಜಿಸಲಾಗುತ್ತದೆ. ರಾಜಸ್ಥಾನದಲ್ಲಿ ಇವನನ್ನು ‘ಕಠುಶ್ಯಾಮ ಜಿ’ ಎಂದು ಕರೆದು ಪೂಜಿಸುತ್ತಾರೆ. ಗುಜರಾತ್’ನಲ್ಲಿ ಬಲಿಯ ದೇವ್ ಎಂದು ಬಾರ್ಬರಿಕ ಕರೆಸಿಕೊಂಡರೆ, ನೇಪಾಳಿಗರು ಇವನನ್ನು ರಾಜಾ ಯಲಂಬರ ಮತ್ತು ಆಕಾಶ ಭೈರವ ಎಂಬುದಾಗಿ ಪೂಜಿಸುತ್ತಾರೆ.

✒️ ಹೆಬ್ಬುಲಿ ರಮ್ಮಿ

2 thoughts on “ಯಾರು ಈ ಬಾರ್ಬರಿಕ..?

  1. ಕಡಲತಡಿಯ ಪುಟ್ಟ ಗ್ರಾಮ ಖಾರ್ವಿ ಸಮಾಜದ ಅದ್ವಿತೀಯ ಪ್ರತಿಭೆಗಳ ಮಹಾ ಸಂಗಮ ಯಕ್ಷಗಾನ ಹಾಡುಗಾರಿಕೆ ಸಾಹಿತ್ಯ ಸಮಾಜ ಸೇವೆ ಸೇರಿದಂತೆ ಹತ್ತು ಹಲವು ಪ್ರತಿಭೆಗಳು ಮಹಾವೃಕ್ಷಗಳಾಗಿ ಕಂಪನ್ನು ಚೆಲ್ಲುತ್ತಾ ಸಮಾಜದ ಕೀರ್ತಿ ಯನ್ನು ಪ್ರಜ್ವಲಗೊಳಿಸುತ್ತಿದ್ದಾರೆ ಒಬ್ಬರನ್ನು ಮೀರಿಸುವ ಮತ್ತೊಬ್ಬರು ಇಲ್ಲಿ ಸೃಷ್ಟಿಯಾಗುತ್ತಿದ್ದಾರೆ ಹೆಬ್ಬುಲಿ ರಮ್ಮಿ ಮಹಾಭಾರತದ ಮಹಾಪರಾಕ್ರಮಿ ಬರ್ಬರಿಕಾ ಕಥೆಯನ್ನು ಮನೋಜ್ಞ ವಾಗಿ ಪಡಿಮೂಡಿಸಿದ್ದಾರೆ ಅಭಿನಂದನೆಗಳು👍👍👌👌✌️🙏🙏🙏🙏✍️

    1. ಧನ್ಯವಾದಗಳು ಉಮಾಕಾಂತಣ್ಣ 🙏🙏🙏

Leave a Reply

Your email address will not be published. Required fields are marked *