ಸಮಾಜ ಕಂಡ ಬಹುಮುಖ ಪ್ರತಿಭೆಯ ಅದ್ಭುತ ಕಲಾವಿದ ಸುಧೀರ್

ಕಲೆ ಎಂಬುದು ಯಾರಿಗೆ ಒಲಿಯುತ್ತದೆ ಎಂಬುದು ಯಾರಿಗೂ ಅರಿವಿಗೆ ಇರದ ಸಂಗತಿ. ಬದುಕಿನಲ್ಲಿ ಕಲೆಯಿಂದಲೇ ನೆಲೆ ಕಂಡುಕೊಂಡವರು ಹಲವರು. ತಮ್ಮ ಬದುಕನ್ನೇ ಕಲೆಗೆ ಅರ್ಪಿಸಿದವರು ಇನ್ನೂ ಕೆಲವರು. ಮನದಲ್ಲಿ ಮೂಡಿದ ಭಾವಕ್ಕೆ ಕುಂಚದ ಮೂಲಕ ಚಿತ್ರರೂಪ ನೀಡುವುದು ಕಷ್ಟಕರವಾದರೂ ಕೂಡ, ಆ ಕಷ್ಟದ ಕೆಲಸಕ್ಕೆ ಇಷ್ಟದ ಲೇಪನ ಕೊಡುವವರೇ ಚಿತ್ರಕಲಾವಿದರು.

ಇವರು ತಮ್ಮ ಕಲಾನೈಪುಣ್ಯದಿಂದ ಮನೋಹರ ಚಿತ್ರಗಳನ್ನು ಕುಂಚದಲ್ಲಿ ಮೂಡಿಸಬಲ್ಲರು. ಇಂತಹ ಪ್ರತಿಭಾವಂತ ಯುವ ಚಿತ್ರ ಕಲಾವಿದರಲ್ಲಿ ಅಪ್ಪಟ ಪ್ರತಿಭೆ ಮತ್ತು ತುಂಬ ಕಷ್ಟದಿಂದ ಬೆಳೆದು ಬಂದ ಸುಧೀರ್ ಕೂಡಾ ಓರ್ವ ಪ್ರತಿಭಾನ್ವಿತ ಕಲಾವಿದ. ಕಲೆಯನ್ನು ಎಲ್ಲರೂ ಹವ್ಯಾಸವನ್ನಾಗಿ ಮಾಡಿಕೊಳ್ಳುತ್ತಾರೆ ಆದರೆ ಇವರು ಕಲೆಯನ್ನು ವೃತ್ತಿಯಾಗಿ ಮಾಡಿಕೊಂಡಿದ್ದಾರೆ. ಇವರು ಮಾತು ಕಡಿಮೆ ಕೆಲಸ ಹೆಚ್ಚು ಎನ್ನುವ ಮನುಷ್ಯ Good Human Being.

ಸುಧೀರ್ ಅವರು 19 ಏಪ್ರಿಲ್ 1992ರಂದು ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಸುರೇಶ್ ಖಾರ್ವಿ ಮತ್ತು ಲಕ್ಷ್ಮಿ ಅವರ ಮಗನಾಗಿ ಜನಿಸಿದರು. ಇವರು ಆವೆ ಮಣ್ಣಿನ ಕಲಾಕೃತಿ, ಮರಳು ಶಿಲ್ಪ, ರೇಖಾಚಿತ್ರ, ಭಾವಚಿತ್ರ, ನಿಸರ್ಗ ಚಿತ್ರಣ, ಟ್ಯಾಟೂ ಕಲೆ, ಕ್ಯಾನ್ವಾಸ್ ಪೇಂಟಿಂಗ್, ವಾಲ್ ಪೇಂಟಿಂಗ್ ಮತ್ತು ಬಾಡಿ ಆರ್ಟ್ ಪರಿಣಿತರಾಗಿದ್ದು, ಇವರ ಪ್ರಕೃತಿ ಚಿತ್ರಗಳು ಚಿತ್ರಕಲೆಯಲ್ಲಿ ಒಂದು ವಿಶಿಷ್ಟತೆಯನ್ನು ಪಡೆದಿದೆ. ಇವರು ರಚಿಸಿರುವ ಪ್ರಕೃತಿ ಚಿತ್ರಗಳಲ್ಲಿ ವರ್ಣಸಂಯೋಜನೆ ವೈವಿಧ್ಯಮಯವಾಗಿದೆ.

ಇವರ ಕುಟುಂಬದಲ್ಲಿನ ಆರ್ಥಿಕ ಮತ್ತು ಕೆಲವೊಂದು ತೊಂದರೆಗಳಿಂದ ಇವರ ಬಾಲ್ಯಜೀವನ ಇವರನ್ನು ಮೌನವಾಗಿ ಇರಿಸಿತ್ತು. ಕಲಾವಿದರಿಗೆ ಮೂಲ ಪ್ರೇರಣೆ ಪ್ರಕೃತಿ. ಅದರಂತೆ ಪರಿಸರದಲ್ಲಿನ ವರ್ಣಸಂಯೋಜನೆ, ಬೆಳೆದ ವಾತಾವರಣ, ಆಕಾಶದಲ್ಲಿನ ಮೋಡಗಳನ್ನು ನೋಡಿ ತನ್ನನ್ನು ತಾನು ಮರೆಯುತ್ತಿದ್ದರು. ಎಲ್ಲವನ್ನು ಮನಸ್ಸಿನಲ್ಲಿ ತರ್ಕ ಮಾಡುತ್ತಿದ್ದರು. “ಬಹುಶಃ ಮುಂದೆ ಇವರ ಚಿತ್ರ ಕಲೆಯ ಬೆಳವಣಿಗೆಗೆ ಇದು ಸ್ಪೂರ್ತಿ” ಆಗಿರಬೇಕು. ಐದನೆಯ ವಯಸ್ಸಿನಿಂದಲೇ ಚಿತ್ರಗಳನ್ನು ಗೀಚುತ್ತಿದ್ದ ಹುಡುಗ, ವಿದ್ಯಾಭ್ಯಾಸದಲ್ಲಿ ಅಷ್ಟೇನೂ ಆಸಕ್ತಿ ತೋರುತ್ತಿರಲಿಲ್ಲ. ಇದು ಸಹಜವಾಗಿ ಪೋಷಕರಲ್ಲಿ ಆತಂಕಕ್ಕೆ ಎಡೆಮಾಡಿತ್ತು. ಸುಧೀರ್ ಅವರಲ್ಲಿದ್ದ ಕಲೆಯ ಆಸಕ್ತಿಯನ್ನು ಮನಗಂಡು ಅವರ ತಂದೆಯು ತನ್ನ ಹಿತೈಷಿ ಅವರ ಮಾತಿನಂತೆ 2009ರಲ್ಲಿ ಉಡುಪಿಯ ಚಿತ್ರಕಲಾ ಮಂದಿರ ಕಲಾ ಶಿಕ್ಷಣವನ್ನು ಒಲ್ಲದ ಮನಸ್ಸಿನಲ್ಲಿ ಸೇರಿಸಿದರು . ಕಲಾಭ್ಯಾಸವನ್ನು ಧ್ಯೇಯವಾಗಿಟ್ಟುಕೊಂಡು ಚಿತ್ರಕಲೆಯ ಜೊತೆಗೆ, ಸಂಜೆಯ ಹೊತ್ತು ಕುಂದಾಪುರದಲ್ಲಿ ಗೂಡಂಗಡಿಯಲ್ಲಿ ಕೆಲಸ ಮಾಡಿ ತಂದೆಯವರಿಗೆ ಸಹಾಯ ಮಾಡುತ್ತಿದ್ದರು.

ಉಡುಪಿಯ ಚಿತ್ರ ಕಲಾಮಂದಿರದಲ್ಲಿ ಐದುವರ್ಷದ BVA(ಬ್ಯಾಚುಲರ್ ಆಫ್ ವಿಜ್ವಲ್ ಆರ್ಟ್) ಪದವಿ ಪಡೆದರು ನಂತರ ಕರ್ನಾಟಕ ಸ್ಟೇಟ್ ಓಪನ್ ಇನ್ಸ್ಟಿಟ್ಯೂಟ್ ನಲ್ಲಿ MFA ( ಮಾಸ್ಟರ್ ಆಫ್ ಆರ್ಟ್) ಸ್ನಾತಕೋತ್ತರ ಪದವಿ ಪಡೆದರು . ಆರ್ಟ್ ಕಲಿತು ಏನು ಮಾಡುತ್ತಿ? ಅದರಿಂದ ಏನು ಸಿಗುತ್ತೆ? ಎಂದು ಟೀಕಿಸುವವರು ಹೆಚ್ಚು. ಇದನ್ನು ಸವಾಲಾಗಿ ಸ್ವೀಕರಿಸಿದರು. ಕಾಲೇಜು ದಿನಗಳು ಮುಗಿದ ನಂತರ ನಿಜವಾದ ಸವಾಲುಗಳು ಇವರಿಗೆ ಎದುರಾಯಿತು. ಮಾಸ್ಟರ್ ಡಿಗ್ರಿಯ ಜೊತೆಗೆ ಹೆಬ್ರಿ ಆಂಗ್ಲಮಾಧ್ಯಮ ಶಾಲೆಯಲ್ಲಿ ಅರೆಕಾಲಿಕ ಚಿತ್ರಕಲಾ ಶಿಕ್ಷಕರಾಗಿ ಕಾರ್ಯನಿರ್ವಹಿಸಿದರು. ನಂತರ ಕೋಣಿ, ಮೂಡಲ್ಕಟ್ಟೆ, ಕಾಳಾವಾರ ಈ ಮೂರು ಸರಕಾರಿ ಶಾಲೆಗಳಲ್ಲಿ( Tender Basic Job)ಚಿತ್ರಕಲಾ ಶಿಕ್ಷಕರಾಗಿ ಸ್ವಲ್ಪ ಸಮಯ ಕೆಲಸವನ್ನು ಮಾಡುತ್ತಾರೆ. ಇದರ ಜೊತೆಜೊತೆಗೆ ಸಾಲಿಗ್ರಾಮ ಕುಂದಾಪುರ, ಉಡುಪಿಯಲ್ಲಿ ಕೆಲವು ಕಡೆ ಮಕ್ಕಳಿಗೆ ಹವ್ಯಾಸಿ ಚಿತ್ರಕಲೆ ತರಗತಿಯನ್ನು ನಡೆಸಿಕೊಡುತ್ತಾರೆ.

ಕೆಲವೊಂದು ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಕಲಾ ಶಿಕ್ಷಕರಾಗಲು ಆಹ್ವಾನ ಬಂದಿದ್ದರೂ ಕೂಡ ಹೋಗದೆ , ಕಲಾವಿದರಾಗುವ ಉದ್ದೇಶದಿಂದ ಎಲ್ಲಾ ಕೆಲಸವನ್ನು ಬಿಟ್ಟು ಕಲಾವಿದನಾಗಿ ಗುರುತಿಸಲು ಪರಿಶ್ರಮಗಳನ್ನು ಮಾಡುತ್ತಾರೆ . ಉಡುಪಿ ಜಿಲ್ಲೆಯ ಹಲವಾರು ಮನೆಗಳಲ್ಲಿ, ದೇವಸ್ಥಾನಗಳಲ್ಲಿ, ಶಾಲೆಗಳಲ್ಲಿ ಇವರು ಮಾಡಿದ ವಾಲ್ ಪೇಂಟಿಂಗ್ ತ್ರೀಡಿ ಪೇಂಟಿಂಗ್ ಕ್ಯಾನ್ವಾಸ್ ಪೇಂಟಿಂಗ್ ಗಳನ್ನು ನೋಡಬಹುದು. ಹಲವಾರು ಬೇಸಿಗೆ ಶಿಬಿರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ.

ಇಷ್ಟೇ ಅಲ್ಲದೆ ಉಡುಪಿಯಲ್ಲಿ ಬೇಸಿಗೆ ಶಿಬಿರವನ್ನು ನಡೆಸಿದ್ದಾರೆ. ಇವರ ಪ್ರತಿಭೆಯನ್ನು ಮನಗಂಡು “ಉಡುಪಿಯ ಚಿತ್ರಸಿರಿ ಆರ್ಟ್ ಸೆಂಟರ್” ಅವರು ಸನ್ಮಾನವನ್ನು ಮಾಡುತ್ತಾರೆ. ನಂತರದ ದಿನಗಳಲ್ಲಿ ಒಬ್ಬ ಕಲಾವಿದನಾಗಿ ಗುರುತಿಸಿಕೊಂಡು ಕುಂದಾಪುರ, ಉಡುಪಿ, ಕಾರವಾರ, ಕಾರ್ಕಳ, ಬೆಂಗಳೂರು ಹೀಗೆ ಹಲವು ಕಡೆಗಳಲ್ಲಿ ಆರ್ಟ್ ಕ್ಯಾಂಪ್ ಗಳಲ್ಲಿ ಭಾಗವಹಿಸಿರುತ್ತಾರೆ. ಹಲವಾರು ಚಿತ್ರಕಲೆ ಸ್ಪರ್ಧೆಗಳಲ್ಲಿ ತೀರ್ಪುಗಾರರಾಗಿ ಗುರುತಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ “ಚಿತ್ರಕಲಾ ಪರಿಷತ್” ನಡೆಸುವ ಚಿತ್ರಸಂತೆಯಲ್ಲಿ ಇವರು ಪ್ರತಿವರ್ಷ ಭಾಗವಹಿಸುತ್ತಿದ್ದರು. ಇವರ ಜಲವರ್ಣದ ಕಲಾಕೃತಿಗಳಿಗೆ ತುಂಬಾನೇ ಮೆಚ್ಚುಗೆ ಬರುತ್ತಿತ್ತು. ಕಲಾವಿದ ಬಿ ಕೆ ಎಸ್ ವರ್ಮ ಕೂಡ ಇವರ ಕಲಾಕೃತಿಯನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು .

MFA ಕಲಿಯುತ್ತಿರುವಾಗ, ಮಂಗಳೂರಿನಲ್ಲಿ ಇವರು ಮತ್ತು ಇವರ ಸ್ನೇಹಿತ ರಾತ್ರಿಯ ಹೊತ್ತಿನ ನಿಸರ್ಗವನ್ನು ಚಿತ್ರಿಸಲು ಮಧ್ಯ ರಾತ್ರಿ ಹೊತ್ತಿನಲ್ಲಿ ಒಂದು ಸ್ಥಳಕ್ಕೆ ಹೋಗಿ ಆ ಸ್ಥಳದ ಸೌಂದರ್ಯವನ್ನು ಚಿತ್ರಿಸುತ್ತಿದ್ದರು. ಇದು ಇವರ ಕಲೆಯಲ್ಲಿನ ಒಂದು ಹುಚ್ಚುತನಕ್ಕೆ ಸಾಕ್ಷಿ. 2016ರಲ್ಲಿ ಇವರ ಬದುಕಿನಲ್ಲಿ ಅನಿರೀಕ್ಷಿತ ಘಟನೆಗಳಿಂದ, ಆರ್ಥಿಕ ಪರಿಸ್ಥಿತಿಯಿಂದ, ಏನಾದರೂ ಸಾಧನೆ ಮಾಡಬೇಕೆಂಬ ಹಂಬಲದಿಂದ ಗೆಳತಿಯ ಮಾರ್ಗದರ್ಶನದಂತೆ ಟ್ಯಾಟೂ ಕಲೆಯನ್ನು ಕಲಿಯಲು ಬೆಂಗಳೂರಿಗೆ ಹೋಗುತ್ತಾರೆ. ಟ್ಯಾಟೂ ಕಲೆಯನ್ನು ಸಂಪೂರ್ಣವಾಗಿ ಕಲಿತು Certificate Artist ಆಗಿ ಪ್ರಮಾಣಪತ್ರವನ್ನು ಪಡೆಯುತ್ತಾರೆ.

ಬೆಂಗಳೂರಿನ ಪ್ರತಿಷ್ಟಿತ ಕಂಪನಿಯಲ್ಲಿ ಕಲಾವಿದರಾಗಿ ಆಯ್ಕೆಯಾಗಿ ಕೆಲಸ ಕೂಡ ಸಿಗುತ್ತದೆ. ಟ್ಯಾಟೂ ಕಲೆಯಲ್ಲಿ ಸಾಧನೆ ಮಾಡಬೇಕು ಎನ್ನುವ ದೃಷ್ಟಿಯಿಂದ, ಊರಿನಲ್ಲಿ ಏನಾದರೂ ಮಾಡಬೇಕು ಎಂಬ ಹಂಬಲದಿಂದ ಕೆಲಸವನ್ನು ಬಿಟ್ಟು ಮಂಗಳೂರಿನ ಟ್ಯಾಟೂ ಸ್ಟುಡಿಯೋ ಒಂದರಲ್ಲಿ ಕೆಲಸ ಮಾಡುತ್ತಾರೆ. ನಂತರ ಪೋಷಕರ ಸಹಕಾರದೊಂದಿಗೆ ಕುಂದಾಪುರದಲ್ಲಿ ಎಸ್. ಕೆ(SK) ಟ್ಯಾಟೂ ಸ್ಟುಡಿಯೋ ಎಂಬ ಟ್ಯಾಟೂ ಸ್ಟುಡಿಯೋ ವನ್ನು ಆರಂಭಿಸಿದರು. ಇದೀಗ ಉಡುಪಿಯಲ್ಲಿಯೂ ಕೂಡ ಇವರ ಎಸ್ .ಕೆ ಟ್ಯಾಟೂ ಸ್ಟುಡಿಯೋ ಎರಡನೇ ಶಾಖೆಯು ಆರಂಭಿಸಿದ್ದಾರೆ.

ಇನ್ನು ಕೂಡ ಇವರಲ್ಲಿನ ಕಲೆ ಬೆಳಕಿಗೆ ಬರಲಿ ಎಂದು ಮೊದಲಿನ ಕ್ಕಿಂತಲೂ ಇನ್ನೂ ಹೆಚ್ಚು ಹೆಚ್ಚಾಗಿ ಇವರ ಕಲಾಕೃತಿಗಳು ಮೂಡಿಬರಲಿ ಎಂದು ಹಾರೈಸುತ್ತೇವೆ.

ವರದಿ: ಸುಧಾಕರ್ ಖಾರ್ವಿ
www.kharvionline.com

5 thoughts on “ಸಮಾಜ ಕಂಡ ಬಹುಮುಖ ಪ್ರತಿಭೆಯ ಅದ್ಭುತ ಕಲಾವಿದ ಸುಧೀರ್

  1. ಅದ್ಭುತ ಕಲಾವಿದರು… ಪರಿಚಯ ಚೆನ್ನಾಗಿದೆ…. ಇಂತಹ ಪ್ರತಿಭೆ ಮುನ್ನೆಲೆಗೆ ಬರಬೇಕು.

  2. ಒಬ್ಬ ಒಳ್ಳೆಯ ಕಲಾವಿದನ ಕ್ಯಾನ್ವಾಸ್‌ನ ಮೇಲೆ ಜೀವನದ ಬಣ್ಣಗಳನ್ನು ನೋಡುವುದು ಯಾವಾಗಲೂ ಒಂದು ಸುಂದರ ಅನುಭವ… ಪ್ರಕೃತಿಯ ಸರಳ ಸಂಗತಿಗಳನ್ನು ಕನಸಿನ ರೀತಿ ಹೊರಹಾಕುವ ಸಾಮರ್ಥ್ಯವನ್ನು ಅವರು ಹೊಂದಿರುತಾರೆ ಎಂಬುದಕೆ ನಿಮ್ಮ ಕಲೆ ಸಾಕ್ಷಿ. Great work Sudhir and all the best.

  3. ಭಾವನೆಗಳನ್ನು ಬಣ್ಣದ ಮೂಲಕ ಪರಿಚಯಿಸುವರೇ ಕಲಾವಿದ….ಅದೊಂದು ತಪ್ಪಸ್ಸಿನ ಹಾಗೇ ಕಲಾವಿದರಾಗಿ ಹುಟ್ಟಬೇಕಾದರೆ ಬಹಳ ಪುಣ್ಯ ಮಾಡಿರಬೇಕು ನೀವು ಭಾಗ್ಯವಂತರು…..ಶುಭವಾಗಲಿ ಸರ್ ನಿಮಗೆ💐

  4. ನಾನು ಇವರ ಕಲೆಗಳನ್ನು ನೋಡಿದ್ದೇನೆ. ನಿಜವಾಗಿಯೂ ಅದ್ಭುತ ಪ್ರತಿಭೆಯ.

Leave a Reply

Your email address will not be published. Required fields are marked *