ಕಾಸರಕೋಡಿನ ದಿಟ್ಟ ಹೋರಾಟಗಾರ್ತಿ ರೇಣುಕಾ ಗಣಪತಿ ತಾಂಡೇಲ್

ಜಗತ್ತಿನಾದ್ಯಂತ ಪ್ರತಿವರ್ಷ ಮಾರ್ಚ್ 8 ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಆಚರಿಸಲಾಗುತ್ತದೆ. ಮಹಿಳೆಯರ ಸಾಂಸ್ಕೃತಿಕ, ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿನ ಸಾಧನೆಗಳನ್ನು ಸ್ಮರಿಸಲು ಮಹಿಳಾ ದಿನಾಚರಣೆ ಆಚರಿಸುತ್ತಾರೆ.

ಅದೆಷ್ಟೋ ಮಂದಿ ಮಹಿಳೆಯರು ಎಲೆಮರೆಯ ಕಾಯಿಗಳಾಗಿ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಾಮಾಜಿಕ ಸೇವೆ, ಹೋರಾಟದ ಹಾದಿಯಲ್ಲಿ ಎದುರಾದ ಪ್ರತಿರೋಧಗಳನ್ನು ಮೆಟ್ಟಿ ನಿಂತು ಮುನ್ನಡೆಯುತ್ತಿದ್ದಾರೆ. ಅಂತವರನ್ನು ಗುರುತಿಸಿ ಸಮಾಜಕ್ಕೆ ಪರಿಚಯ ಮಾಡಿಕೊಡುವುದು ನಮ್ಮ ಕರ್ತವ್ಯವಾಗಿದೆ. ಮಹಿಳಾ ದಿನಾಚರಣೆಯ ಈ ಶುಭ ಸಂದರ್ಭದಲ್ಲಿ ದಿಟ್ಟ ಸಾಮಾಜಿಕ ಹೋರಾಟಗಾರ್ತಿಯಾದ ಕೊಂಕಣಿ ಖಾರ್ವಿ ಸಮಾಜದ ಮಹಿಳೆಯಾದ ಹೊನ್ನಾವರ ಕಾಸರಕೋಡಿನ ಶ್ರೀಮತಿ ರೇಣುಕಾ ಗಣಪತಿ ತಾಂಡೇಲ್ ರವರ ಹೋರಾಟದ ಅನಾವರಣ ಇಲ್ಲಿದೆ.

ಹೊನ್ನಾವರ ಕಾಸರಕೋಡು ಟೊಂಕದಲ್ಲಿ ಎಲ್ಲಾ ಪರಿಸರ ನಿಯಮಗಳನ್ನು ಗಾಳಿಗೆ ತೂರಿ ನಿರ್ಮಾಣವಾಗುತ್ತಿರುವ ಖಾಸಗಿ ವಾಣಿಜ್ಯ ಬಂದರು ಕಾಮಗಾರಿಯನ್ನು ವಿರೋಧಿಸಿ ರೇಣುಕಾ ಗಣಪತಿ ತಾಂಡೇಲ್ ಮಹಿಳೆಯರನ್ನು ಸಂಘಟಿಸಿ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಉದ್ದೇಶಿತ ವಾಣಿಜ್ಯ ಬಂದರು ನಿರ್ಮಾಣ ಕಾಮಗಾರಿಯ ಕಪ್ಪುದೈತರು ಕಾಸರಕೋಡು ಕಡಲತೀರದಲ್ಲಿ ಕಡಲಾಮೆ ಮೊಟ್ಟೆಗಳನ್ನು ದ್ವಂಸಗೊಳಿಸಿದಾಗ ಇದರ ವಿರುದ್ಧ ಜನಜಾಗೃತಿ ಮೂಡಿಸಿದರು. ಮೀನುಗಾರರ ಮನೆ ಬದುಕನ್ನು ನಿರ್ನಾಮ ಮಾಡಲೊರಟಿರುವ ಕಪ್ಪು ದೈತ್ಯರ ವಿರುದ್ಧ ಹೋರಾಟದ ಮಂಚೂಣಿಯಲ್ಲಿ ಇರುವ ರೇಣುಕಾ ತಾಂಡೇಲ್ ರವರ ಪತಿ ಕೂಡಾ ಹೋರಾಟ ಮಾಡುತ್ತಿದ್ದಾರೆ. ಕಪ್ಪುದೈತರು ಮತ್ತು ಅವರ ಗುಲಾಮರಾಗಿರುವ ಕೆಲವು ಸಮಾಜದ್ರೋಹಿಗಳು ಇವರ ಹೋರಾಟದ ಮೇಲೆ ಕೆಂಗಣ್ಣು ಬೀರುತ್ತಾ ಬಂದ್ದಿದ್ದಾರೆ.

ಇತ್ತೀಚೆಗೆ ಸರ್ಕಾರ ಪೋಲೀಸ್ ಬಲ ಪ್ರಯೋಗಿಸಿ ಕಾಸರಕೋಡು ಟೊಂಕದಲ್ಲಿ ಪರಿಸರ ಸಂಬಂಧಿ ನಿಯಮಾವಳಿಗಳನ್ನು ಉಲ್ಲಂಘನೆ ಮಾಡಿ ರಸ್ತೆ ನಿರ್ಮಾಣ ಮಾಡಿದೆ. ಈ ಸಂದರ್ಭದಲ್ಲಿ ಹೋರಾಟದ ಮಂಚೂಣಿಯಲ್ಲಿ ಇದ್ದ ರೇಣುಕಾ ತಾಂಡೇಲ್ ದಂಪತಿಗಳನ್ನು ಮತ್ತು ಇತರ ಮೀನುಗಾರ ಹೋರಾಟಗಾರರನ್ನು ಪೋಲೀಸರು ಬಂಧಿಸಿ ದೌರ್ಜನ್ಯ ನಡೆಸಿದ್ದಾರೆ. ಬಂಡವಾಳಶಾಹಿ ವ್ಯವಸ್ಥೆಯ ಪೋಷಕರಾಗಿ ಆಳುವ ಪ್ರಭುಗಳು ಬಡ ಮೀನುಗಾರರ ಮೇಲೆ ನಡೆ ಸುತ್ತಿರುವ ದೌರ್ಜನ್ಯಗಳಿಗೆ ಪ್ರತಿರೋಧ ಒಡ್ಡುತ್ತಾ ರೇಣುಕಾ ತಾಂಡೇಲ್ ಪ್ರಬಲವಾಗಿ ದಿಟ್ಟತನದಿಂದ ಹೋರಾಟ ಮಾಡುತ್ತಿದ್ದಾರೆ.

ಮೀನುಗಾರರ ಸರ್ವನಾಶ ಮಾಡಲೊರಟಿರುವ ಕಪ್ಪುದೈತ್ಯರ ದೌರ್ಜನ್ಯಗಳನ್ನು ಮೆಟ್ಟಿ ಹೋರಾಟದ ಹಾದಿಯಲ್ಲಿ ದಿಟ್ಟ ಹೆಜ್ಜೆ ಇಡುತ್ತಿದ್ದಾರೆ. ಕಾಸರಕೋಡು ಬಡ ಮೀನುಗಾರರ ನೋವಿಗೆ ಪ್ರತಿಭಟನೆಯ ಸ್ವರೂಪ ನೀಡಿರುವ ರೇಣುಕಾ ತಾಂಡೇಲ್ ರವರ ಪರಿಸರ, ಅವರಿಗಿರುವ ಮಿತಿಗಳ ನಡುವೆಯೇ ಅವರ ಸಾಧನೆಯನ್ನು ಗುರುತಿಸಬೇಕಾಗುತ್ತದೆ.

ತಮ್ಮ ಕೌಟುಂಬಿಕ ಬದುಕಿನ ನಡುವೆ ಕಾಸರಕೋಡು ಬಡ ಮೀನುಗಾರರ ಸಮಸ್ಯೆಗಳನ್ನೆತ್ತಿಕೊಂಡು ಅರ್ಥಪೂರ್ಣ ಹೋರಾಟದ ಸೈಧಾಂತಿಕ ನೆಲೆಯಲ್ಲಿ ಮುಂಚೂಣಿಯಲ್ಲಿ ನಿಂತು ಎಲ್ಲಾ ರೀತಿಯ ಒತ್ತಡ, ಬೆದರಿಕೆ, ದೌರ್ಜನ್ಯಗಳನ್ನು ಎದುರಿಸಿ ಮೀನುಗಾರರನ್ನು ಸಂಘಟಿಸಿ ಹೋರಾಟ ನಡೆಸುತ್ತಿರುವ ರೇಣುಕಾ ತಾಂಡೇಲ್ ರವರನ್ನು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಈ ಸಂದರ್ಭದಲ್ಲಿ ಸಮಾಜಕ್ಕೆ ಪರಿಚಯಿಸುವುದು ಹೆಚ್ಚು ಅರ್ಥಪೂರ್ಣವಾಗುತ್ತದೆ. ಬಡ ಮೀನುಗಾರರ ಪರವಾಗಿ ನಿರಂತರವಾಗಿ ಹೋರಾಟ ಮಾಡುತ್ತಿರುವ ರೇಣುಕಾ ಗಣಪತಿ ತಾಂಡೇಲ್ ಹಾಗೂ ಎಲ್ಲಾ ಮಹಿಳೆಯರಿಗೆ ಈ ಶುಭ ಸಂದರ್ಭದಲ್ಲಿ ಶುಭವನ್ನು ಹಾರೈಸುತ್ತದೆ.

ಸುಧಾಕರ್ ಖಾರ್ವಿ Team kharvionline.com

One thought on “ಕಾಸರಕೋಡಿನ ದಿಟ್ಟ ಹೋರಾಟಗಾರ್ತಿ ರೇಣುಕಾ ಗಣಪತಿ ತಾಂಡೇಲ್

  1. ದಿಟ್ಟ ನಡೆಯ ಗಟ್ಟಿದ್ವನಿಯ ಹೋರಾಟಗಾರ್ತಿ ರೇಣುಕಾ ಗಣಪತಿ ತಾಂಡೇಲ್ ರವರಿಗೆ ಮಹಿಳಾ ದಿನಾಚರಣೆಯ ಹೃದಯಸ್ಪರ್ಶಿ ಅಭಿನಂದನೆಗಳು💐💐💐💐💐💐👏👏👏👏🙏🙏🙏

Leave a Reply

Your email address will not be published. Required fields are marked *